ಮಂಗಳೂರು, ಫೆ 26 (DaijiworldNews/HR): ಹರ್ಷ ಮನೆಗೆ ಕಾಂಗ್ರೆಸ್ ಪಕ್ಷದಿಂದ ಯಾರು ಹೋಗಿಲ್ಲ ಅನ್ನೋದು ನಿಜ. ಆದ್ರೆ ಅದು ವೈಯಕ್ತಿಕ ದ್ವೇಷದಿಂದ ನಡೆದಿರುವ ಮರ್ಡರ್. ಅದಕ್ಕೆ ರಾಜಕೀಯ ಬಣ್ಣ ಕಟ್ಟಲಾಗಿದ್ದು, ಹರ್ಷ ಸಾವಿಗೂ ಹಿಜಾಬ್ ಗೂ ಸಂಬಂಧವಿಲ್ಲ. ಹರ್ಷ ಸಾವಿನ ಬಳಿಕ ನಡೆದ ಗಲಭೆಗೆ ಈಶ್ವರಪ್ಪನೆ ಕಾರಣ. ಅವರು 144 ಸೆಕ್ಷನ್ ನ್ನು ಈಶ್ವರಪ್ಪ ಉಲ್ಲಂಘಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ಹಿಂದೆ ಧರ್ಮಸ್ಥಳದಲ್ಲಿ ನಮ್ಮ ಕಾಂಗ್ರೆಸ್ ಕಾರ್ಯಕರ್ತನನ್ನೆ ಹತ್ಯೆ ಮಾಡಿದ್ದಾರೆ. ಯಾರೇ ಕೊಲೆ ಮಾಡಿದ್ರು ಅದನ್ನ ನಾನು ಖಂಡಿಸುತ್ತೇನೆ. ಶಿವಮೊಗ್ಗ, ಬೆಳ್ತಂಗಡಿ ಎರಡು ಹತ್ಯೆಯನ್ನು ಖಂಡಿಸುತ್ತೇನೆ. ಜೀವ ಅಮೂಲ್ಯವಾದದು ಕೊಲೆ ಮಾಡುವ ಮಟ್ಟಕ್ಕೆ ಹೋಗಬಾರದು ಎಂದಿದ್ದಾರೆ.
ಎಸ್ಡಿಪಿಐ, ಪಿಎಫ್ಐ ಸಂಘಟನೆ ಬ್ಯಾನ್ ವಿಚಾರವಾಗಿ ಮಾತನಾಡಿದ ಅವರು, ಈ ಸಂಘಟನೆಯನ್ನು ಬ್ಯಾನ್ ಮಾಡೋದಾದ್ರೆ ಮಾಡಿ ಯಾರು ಬೇಡ ಅಂತಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ನಿಮ್ಮ ಕೈಯಲ್ಲಿ ಇದೆ. ನಾವು ಬ್ಯಾನ್ ಮಾಡೋದು ಬೇಡ ಎಂದು ಹೇಳಿದ್ದೇವಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು 50-60 ವರ್ಷಗಳವರೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರಲಿದೆ. ಇಂದಿಗೂ ಬೆಂಗಳೂರಿನಲ್ಲಿ 20% ನಾಗರಿಕರಿಗೆ ಕಾವೇರಿ ನೀರು ಸಿಗುತ್ತಿಲ್ಲ. ಆದ್ದರಿಂದ 'ನಮ್ಮ ನೀರು ನಮ್ಮ ಹಕ್ಕು' ಘೋಷ ವಾಕ್ಯದಡಿ ಮೇಕೆದಾಟು ಪಾದಯಾತ್ರೆ ಮಾಡಲಿದ್ದೇವೆ ಎಂದರು.
ಉಕ್ರೇನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿರುವ ವಿಚಾರರ ಕುರಿತು ಮಾತನಾಡಿದ ಅವರು, ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿರೋದು 10-15 ದಿನಗಳ ಹಿಂದೆಯೇ ತಿಳಿದಿತ್ತು. ಭಾರತದ, ಕರ್ನಾಟಕದ ವಿದ್ಯಾರ್ಥಿಗಳು ಅಲ್ಲಿದ್ದಾರೆ ಎಂಬುದು ಗೊತ್ತಿತ್ತು. ಆ ವಿದ್ಯಾರ್ಥಿಗಳನ್ನು ಮರಳಿ ಭಾರತಕ್ಕೆ ಕರೆ ತರಲು ಕೇಂದ್ರ ಸರಕಾರವಾಗಲೀ, ರಾಜ್ಯ ಸರಕಾರವಾಗಲೀ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಈಗ ವಿದ್ಯಾರ್ಥಿಗಳು ಬಂಕರ್ಸ್ ಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ ವಿದ್ಯಾರ್ಥಿಗಳು ಬಾಕಿಯಾಗಿದ್ದಾರೆ. ವಿದ್ಯಾರ್ಥಿಗಳಿರುವ ಪಕ್ಕದಲ್ಲಿಯೇ ಬಾಂಬ್ ಗಳು ಸ್ಪೋಟ ಆಗುತ್ತಿದೆ. ಈಗ ಫ್ಲೈಟ್ ಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಮರಳಿ ತಾಯ್ನಾಡಿಗೆ ಬರಲು ಸಮಸ್ಯೆಯಾಗಿದೆ. ಬಹಳ ಮಂದಿ ವಿದ್ಯಾರ್ಥಿಗಳಿಗೆ ಊಟಕ್ಕೂ ತೊಂದರೆಯಾಗಿದ್ದು, ದುಡ್ಡೂ ಇಲ್ಲ. ಸರಕಾರ ಇಂತಹ ವಿಚಾರಗಳಲ್ಲಿ ಈ ರೀತಿ ಮೈಮರೆಯಬಾರದು. ಇಂತಹ ವಿಷಯಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.