ಮಂಗಳೂರು, ಫೆ 26 (DaijiworldNews/HR): ವಿಧಾನಸಭೆ ಕಲಾಪ ನಡೆಸಲು ಕಾಂಗ್ರೆಸ್ ಅಡ್ಡಿಪಡಿಸುತ್ತಿರುವ ಹಾಗೂ ರಾಜ್ಯದಲ್ಲಿ ಶಾಂತಿ ಕದಡುತ್ತಿರುವುದನ್ನು ಖಂಡಿಸಿ ಬಿಜೆಪಿ ಉತ್ತರ ಮಂಡಲ ವತಿಯಿಂದ ನಗರದ ಕಾವೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಕಾವೂರು ಬಿಜೆಪಿ ಕಚೇರಿಯಿಂದ ಕಾವೂರು ಜಂಕ್ಷನ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು ಈ ವೇಳೆ ಪ್ರತಿಭಟನಾಕಾರರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ, ''ರಾಜ್ಯದ ಪ್ರಗತಿಗಾಗಿ ನೂರಾರು ಅಭಿವೃದ್ಧಿ ಪರ ಕಾಯಿದೆಗಳನ್ನು ಜಾರಿಗೊಳಿಸುತ್ತಿರುವ ಆಡಳಿತಾರೂಢ ಬಿಜೆಪಿಯೊಂದಿಗೆ ಕಾಂಗ್ರೆಸ್ ಕೈಜೋಡಿಸಬೇಕಿತ್ತು. ಆದರೆ ವಿಧಾನಸಭೆ ಕಲಾಪಕ್ಕೆ ಅಡ್ಡಿಪಡಿಸಿ ವಿಧಾನಸಭೆಯೊಳಗೆ ರಾಷ್ಟ್ರಧ್ವಜ ಹಿಡಿದು ಆ ಮೂಲಕ ದೇಶವಿರೋಧಿಗಳೆಂದು ತೋರಿಸಿಕೊಳ್ಳುತ್ತಿದ್ದಾರೆ" ಎಂದರು.
"ಕಾಂಗ್ರೆಸ್ ಹಿಜಾಬ್ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ ಮತ್ತು ತನ್ನ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳಲು ಎಸ್ಡಿಪಿಐಯೊಂದಿಗೆ ಸೇರಿಕೊಂಡಿತು. ಅವರು ಶಿಕ್ಷಣ ಪಡೆಯುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರ ಮನಸ್ಸನ್ನು ಪ್ರಚೋದಿಸಿದರು. ಶೈಕ್ಷಣಿಕ ಕ್ಷೇತ್ರ ಎಲ್ಲರಿಗೂ ಸಮಾನ. ಎಲ್ಲ ಜಾತಿ, ಧರ್ಮದ ಜನರು ಶಿಕ್ಷಣ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಆದರೆ, ಶಿಕ್ಷಣಕ್ಕಿಂತ ಧರ್ಮಕ್ಕೆ ಆದ್ಯತೆ ನೀಡಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಆಧುನಿಕ ಕಾಲದಿಂದಲೂ ಶಿಲಾಯುಗಕ್ಕೆ ಕೊಂಡೊಯ್ಯುವ ಸಂಕುಚಿತ ಮನೋಭಾವನೆ ತೋರಿದ್ದಾರೆ" ಎಂದಿದ್ದಾರೆ.
ಇನ್ನು ಶಿವಮೊಗ್ಗದಲ್ಲಿ ಗೂಂಡಾಗಳು ಭಜರಂಗದಳ ಕಾರ್ಯಕರ್ತ ಹರ್ಷನನ್ನು ಕೊಂದು ತಮ್ಮ ಕ್ರೌರ್ಯವನ್ನು ತೋರಿಸಿದ್ದಾರೆ. ಆರು ಗಂಟೆಯೊಳಗೆ ದಾಳಿಕೋರರನ್ನು ಹಿಡಿದು ಜೈಲಿಗೆ ಕಳುಹಿಸಿದ್ದೇವೆ. ಬಿಜೆಪಿ ಸರ್ಕಾರವು ಪರಿಸ್ಥಿತಿಯನ್ನು ನಿರ್ದಾಕ್ಷಿಣ್ಯವಾಗಿ ನಿಯಂತ್ರಿಸಿದೆ ಮತ್ತು ತನ್ನ ಆಡಳಿತದಲ್ಲಿ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದೆ. ಬಿಜೆಪಿ ಆಡಳಿತದಲ್ಲಿ ಕೋಮುಗಲಭೆ ಸೃಷ್ಟಿಸಿ ಬಿಜೆಪಿ ಹೆಸರು ಕೆಡಿಸುವ ಷಡ್ಯಂತ್ರ ಇದಾಗಿದೆ ಎಂದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಎಸ್ಡಿಪಿಐ ಮತ್ತು ಕಾಂಗ್ರೆಸ್ ಪರಸ್ಪರ ಮೈತ್ರಿಯಿಂದ ಅಧಿಕಾರ ನಡೆಸುತ್ತಿವೆ. ಕಾಂಗ್ರೆಸ್ ಸದಸ್ಯರು ಕೋಮುವಾದಿ ಶಕ್ತಿಗಳಿಂದ ದೂರವಾಗಬೇಕಾದರೆ ಕೂಡಲೇ ರಾಜೀನಾಮೆ ನೀಡಿ ಹೊರ ಬರಬೇಕು ಎಂದಿದ್ದಾರೆ.
ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಉಪಾಧ್ಯಕ್ಷ ಗಣೇಶ್ ಹೊಸಬೆಟ್ಟು, ಜಿಲ್ಲಾ ಮಾಧ್ಯಮ ಪ್ರಭಾರಿ ರಂದೀಪ್ ಕಾಂಚನ್, ಮುಖ್ಯ ಕಾರ್ಯದರ್ಶಿಗಳಾದ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ಎಂಸಿಸಿ ಸದಸ್ಯರು, ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಮೋರ್ಚಾಗಳ ಪ್ರಮುಖರು, ಮಂಡಲ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.