ಉಳ್ಳಾಲ, ಫೆ. 25 (DaijiworldNews/SM): ಹಿಜಾಬ್ ವಿಚಾರದಲ್ಲಿ ಉಳ್ಳಾಲ ಭಾರತ್ ಕಾಲೇಜಿನಲ್ಲಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿಧಾನ ಸಭಾ ವಿಪಕ್ಷ ಉಪನಾಯಕ ಖಾದರ್ ಈ ಬಗ್ಗೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಜೊತೆ ಸಭೆ ನಡೆಸಿ ಮಾತುಕತೆ ನಡೆಸಿದ್ದೇವೆ ಎಂದಿದ್ದಾರೆ.
ದೈಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿರುವ ಅವರು, ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿ ಚರ್ಚಿಸಲಾಗಿದೆ. ಇಲ್ಲಿಯ ತನಕ ಈ ಕಾಲೇಜಿನಲ್ಲಿ ಯಾವುದಕ್ಕೂ ಅಡಚಣೆ ಇರಲಿಲ್ಲ. ಶಿರ ವಸ್ತ್ರ ಧರಿಸಿ ಇಲ್ಲಿ ಎಲ್ಲರೂ ಶಿಕ್ಷಣ ಪಡೆಯುತ್ತಿದ್ದರು. ನೂರು ವಿದ್ಯಾರ್ಥಿಗಳಿದ್ದು 20 ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು. 50 ಅಲ್ಪಸಂಖ್ಯಾತ ವಿದ್ಯಾರ್ಥಿಗಳು, 30 ಇನ್ನಿತರರು ಇದ್ದಾರೆ. ಸರ್ಕಾರದ ಮಧ್ಯಂತರ ಆದೇಶ ಅನುಷ್ಠಾನ ವೇಳೆ ಗೊಂದಲ ಉಂಟಾಗಿದೆ ಎಂದರು.
ಕಳೆದ ಹಲವು ವರ್ಷಗಳಿಂದ ಶಿರ ವಸ್ತ್ರ ಹಾಕಿದವರು ಸಂಪ್ರದಾಯಿಕವಾಗಿ ಹಾಕುತ್ತಿದ್ದಾರೆ. ಏಕಾಏಕಿ ಅವರಿಗೆ ಅದನ್ನು ತೆಗೆಯಲು ಆಗದ ಪರಿಸ್ಥಿತಿಯಾಗಿದೆ. ಇವರಿಗೆ ಕಾನೂನು ಪ್ರಕಾರ ಅವಕಾಶ ಮಾಡಿಕೊಡದಂತಹ ಪರಿಸ್ಥಿತಿ ಇದೆ. ಸಭೆಯಲ್ಲಿ ಎರಡು ಮೂರು ಸೂತ್ರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆಯಾಗದಂತೆ ಕ್ರಮದ ಭರವಸೆ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.