ಮಂಗಳೂರು, ಫೆ. 25 (DaijiworldNews/SM): ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕಡತ ವಿಲೇವಾರಿ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿ, ನಿಗಧಿ ಪಡಿಸಿದ ಅವಧಿಯೊಳಗೆ ಅವುಗಳ ವಿಲೇವಾರಿ ಮಾಡಬೇಕು, ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಎಚ್ಚರಿಕೆ ನೀಡಿದರು.
ಅವರು ಫೆ.25ರ ಶುಕ್ರವಾರ ಕಡತ ವಿಲೇವಾರಿ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಚ್ರ್ಯೂವಲ್ ಸಭೆಯಲ್ಲಿ ಸೂಚನೆಗಳನ್ನು ನೀಡಿದರು. ಪ್ರಸ್ತುತ ನಡೆಯುತ್ತಿರುವ ಕಡತ ವಿಲೆವಾರಿ ಅಭಿಯಾನದಲ್ಲಿ ಎಲ್ಲ ಇಲಾಖೆಗಳು ಕೂಡ ಒಮ್ಮನಸ್ಸಿನಿಂದ ಪಾಲ್ಗೊಳ್ಳಬೇಕು. ವಿಲೇವಾರಿಯಾಗದೇ ಇರುವ ಹಳೆ ಕಡತಗಳು, ದೂರು ಅರ್ಜಿಗಳು, ಸೇವಾ ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೆವಾರಿ ಮಾಡಲು ಅಧಿಕಾರಿಗಳು ಗುರಿ ನಿಗದಿ ಪಡಿಸಿಕೊಳ್ಳಬೇಕು. ಯಾವ ಕಡತಗಳ ವಿಲೇವಾರಿ ಸಾಧ್ಯವಾಗುವುದಿಲ್ಲವೋ ಅವುಗಳ ಬಗ್ಗೆ ಮತ್ತು ವಿಲೇವಾರಿ ಮಾಡಿದ ಕಡತಗಳ ವರದಿಯನ್ನು ಆಯಾ ಇಲಾಖೆಗಳು ಜಿಲ್ಲಾಡಳಿತಕ್ಕೆ ನೀಡಬೇಕು ಎಂದರು.
ಫೆ.28ರ ಸೋಮವಾರ ಎಲ್ಲಾ ಇಲಾಖೆಗಳು ಕೂಡ ಶೇಕಡಾ 100ರಷ್ಟು ಪ್ರಗತಿ ಸಾಧಿಸಿರಬೇಕು. ಕಡತ ವಿಲೇವಾರಿ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಕಡತ ವಿಲೇವಾರಿ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಂದಾಯ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ಮಾತ್ರ ಇಲ್ಲಿಯವರೆಗೆ ಶೇಕಡಾ 85ರಷ್ಟು ಕಡತಗಳನ್ನು ವಿಲೇವಾರಿ ಮಾಡಿವೆ. ಉಳಿದ ಇಲಾಖೆಗಳು ಇದೇ ಮಾದರಿಯಲ್ಲಿಯೇ ವಿಲೇವಾರಿ ಮಾಡಬೇಕು. ವಿಲೇವಾರಿಯಲ್ಲಿ ಹಿಂದುಳಿದ ಇಲಾಖೆಗಳ ಅಧಿಕಾರಿಗಳು ಫೆ.26 ಮತ್ತು 27ರ ರಜಾ ದಿನಗಳಲ್ಲಿಯೂ ಕೆಲಸ ಮಾಡಿ ಕಡತಗಳ ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಆನ್ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.