ಕಾಸರಗೋಡು, ಫೆ 25 (DaijiworldNews/HR): ಯುದ್ಧಗ್ರಸ್ಥ ಉಕ್ರೇನ್ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಕಾಸರಗೋಡಿನ 50ಕ್ಕೂ ಅಧಿಕ ಮಂದಿ ಸಿಲುಕಿ ಕೊಂಡಿರುವುದಾಗಿ ಮೂಲಗಳು ತಿಳಿಸಿದ್ದು, ಸಂಪರ್ಕ ಸಮಸ್ಯೆ ತಲೆದೋರಿರುವ ಹಿನ್ನಲೆಯಲ್ಲಿ ಸಂಬಂಧಿಕರು, ಕುಟುಂಬಸ್ಥರು ಆತಂಕದಲ್ಲಿದ್ದಾರೆ.
ಉಕ್ರೇನ್ನ ಒಡೆಸಾ ನೇಷನಲ್ ವಿಶ್ವವಿದ್ಯಾನಿಲಯದಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳ ಪೈಕಿ ಆರು ವಿದ್ಯಾರ್ಥಿ ಗಳಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ರಾಯಭಾರಿ ಕಚೇರಿ ಮಾಹಿತಿ ನೀಡಿದೆ.
ಇರಿಯಣ್ಣಿಯ ಅನಿಕೇತನ್ ಅಯ್ಯರ್, ಆದೂರು ಪೊಲೀಸ್ ಠಾಣಾ ಎಸ್ಐ ರತ್ನಾಕರನ್ ಅವರ ಪುತ್ರಿ ಕೃಷ್ಣವೇಣಿ, ಬೋವಿಕ್ಕಾನ ದ ಅಬಿ ಕೆ.ಮುಹಮ್ಮದ್ ಹಾಗೂ ಇನ್ನುವಿದ್ಯಾರ್ಥಿಗಳು ಉಕ್ರೇನ್ ನಲ್ಲಿದ್ದಾರೆ.
ಇನ್ನು ಯಾವುದೇ ಸಂದರ್ಭದಲ್ಲಿ ಮೊಬೈಲ್, ಇಂಟರ್ನೆಟ್ ಸ್ಥಗಿತ ಗೊಳ್ಳುವ ಸಾಧ್ಯತೆ ಇದ್ದು, ಸಂಪರ್ಕ ಕಡಿತಗೊಂಡಲ್ಲಿ ಮುಂದಿನ ಸ್ಥಿತಿ ಏನೆಂಬುದು ಕುಟುಂಬಸ್ಥರು ಆತಂಕಗೊಂಡಿದ್ದಾರೆ.