ಬಂಟ್ವಾಳ, ಫೆ. 24 (DaijiworldNews/SM): ಕಾರಿಂಜ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಫೆ. 27ರಂದು ಶಿವಮಾಲಾಧಾರಣೆ, ಕೋಟಿ ನಾಮಸಂಕೀರ್ತನೆ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಲಾಗಿದೆ ಎಂದು ಪ್ರಾಂತ ಪ್ರಮುಖ ರಾಧಕೃಷ್ಣ ಅಡ್ಯಂತಾಯ ಅವರು ಹೇಳಿದರು.
ಅವರು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವೃತಾಚಾತಣೆಯ ಮೂಲಕ ಹೊಸ ಆಂದೋಲನಕ್ಕೆ ಮುನ್ನುಡಿ ಬರೆಯುವ ಕಾರ್ಯಕ್ಕೆ ಇದು ಸಾಕ್ಷಿಯಾಗುತ್ತದೆ. ಕ್ಷೇತ್ರ ಸಂರಕ್ಷಣೆ ಹಾಗೂ ಪಾವಿತ್ರ್ಯತೆ ಉಳಿಸುವ ಹೋರಾಟದಿಂದ ಜನಾಂದೋಲನದ ಕಡೆಗೆ ಸಾಗಿದೆ.
ಜನಜಾಗೃತಿ ಕಾರ್ಯಕ್ರಮ, ಜಿಲ್ಲಾಧಿಕಾರಿ ಕಚೇರಿ ಕಡೆಗೆ ಭಕ್ತರ ನಡಿಗೆ, ಮನೆಮನೆ ಸಂಪರ್ಕ ಸಹಿಸಂಗ್ರಹ ಅಭಿಯಾನದ ಬಳಿಕ ನಾಲ್ಕನೇ ಹಂತದ ಜನಾಂದೋಲನ ಕಾರ್ಯಕ್ರಮ ಶಿವಮಾಲಾಧಾರಣೆ ಎಂಬ ನೂತನ ಸಂಪ್ರದಾಯದ ಪ್ರಾರಂಭದ ಬಗ್ಗೆ ಸಿದ್ದತೆಗಳು ನಡೆಯುತ್ತಿದೆ ಎಂದು ಅವರು ಹೇಳಿದರು.
ಫೆ.27 ರಂದು ಪೂರ್ವಾಹ್ನ 6. ಗಂಟೆಯ ಒಳಗೆ ಶುಚಿಭೂರ್ತರಾಗಿ ರುದ್ರಾಕ್ಷಿ ಮಾಲಾಧಾರಣೆ ನಡೆದರೆ ಮಾ. 1ರ ಶಿವರಾತ್ರಿಯ ದಿವಸ ಅಪರಾಹ್ನ 4 ಗಂಟೆಗೆ ಮಾಲಾಧಾರಿಗಳಿಂದ ಮತ್ತು ಶಿವಭಕ್ತ ರಿಂದ ಸಂಕೀರ್ತನೆ ಯಾತ್ರೆ ನಡೆಯಲಿದೆ.
ಮಾರ್ಚ್ 2ರಂದು ಬೆಳಿಗ್ಗೆ ಪೂಜೆಯ ನಂತರ ಮಾಲಾವಿಸರ್ಜನೆ ನಡೆಯಲಿದೆ. ಕೇಸರಿ ಲುಂಗಿ ಧರಿಸುವುದು, ಹಣೆಗೆ ಭಸ್ಮಧಾರಣೆ, ಪ್ರತಿದಿನ ಸೂರ್ಯೋದಯ ಕ್ಕಿಂತ ಮುನ್ನ ಮತ್ತು ಸಂಜೆ ಸೂರ್ಯಾಸ್ತದ ಸಮಯ ಶುಚಿಭೂತರಾಗಿ ಶೃದ್ದಾಭಕ್ತಿಯಿಂದ 108 ಬಾರಿ ಓಂ.ನಮ: ಶಿವಾಯ ಮಂತ್ರ ಜಪ, ಬ್ರಹ್ಮಚರ್ಯ ಪಾಲನೆ, ಶರೀರ, ಮನಸ್ಸು, ಭಾವನೆಗಳನ್ನು ವಿಕಾರಗೊಳಿಸುವುದು, ಅಮಲು, ಮಾಂಸಾಹಾರಿ ಸೇವನೆ ನಿಷಿದ್ಧ, ಸಾತ್ವಿಕ ಆಹಾರ, ಬೆಳಿಗ್ಗೆ ರಾತ್ರಿ ಉಪಹಾರ, ಮಧ್ಯಾಹ್ನ ಒಂದು ಹೊತ್ತಿನ ಊಟ ಸ್ವೀಕರಿಸಿ ಅದರ ಪಾವಿತ್ರ್ಯತೆ ಯನ್ನು ಕಟ್ಟುನಿಟ್ಟಾಗಿ ಉಳಿಸಿಕೊಳ್ಳಲು ಅವರು ತಿಳಿಸಿದ್ದಾರೆ.