ಕಾರ್ಕಳ, ಫೆ. 24 (DaijiworldNews/SM): ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಸಂಪನ್ನಗೊಂಡಿದೆ.
ಗುರುವಾರದಂದು ಸಂಪನ್ನ ಬಲಿ ಪೂಜೆ ನಡೆದಿದ್ದು, ಪ್ರಧಾನ ಧರ್ಮಗುರುಗಳಾಗಿ ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ಲಾರೆನ್ಸ್ ಮುಕ್ಕುಝಿ ಬಲಿಪೂಜೆ ನೆರವೇರಿಸಿದರು. ತನ್ನ ಹೋಲಿಕೆಯಲ್ಲೇ ಮಾನವನನ್ನು ಸೃಷ್ಠಿಸಿರುವ ದೇವರು, ಮನುಷ್ಯ ಒಂದು ಕುಟುಂಬದಲ್ಲಿಯೇ ಹುಟ್ಟಿ ಜೀವಿಸಬೇಕೆಂದು ಬಯಸುತ್ತಾರೆ. ದೇವರ ಚಿತ್ತಕ್ಕೆ ಅನುಗುಣವಾಗಿ ನಡೆದು ಸ್ವರ್ಗವನ್ನು ಸೇರುವುದು ಮಾನವ ಜೀವನದ ಗುರಿ. ಮನುಷ್ಯನ ಎಲ್ಲಾ ಪ್ರಯತ್ನಗಳು ಒಳ್ಳೆಯ ಕುಟುಂಬ ಜೀವನವನ್ನು ಜೀವಿಸುವುದೇ ಆಗಿರಬೇಕು ಎಂದು ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ಲಾರೆನ್ಸ್ ಮುಕ್ಕುಝಿ ಸಂದೇಶ ನೀಡಿದರು.
ಅವರು ’ಕ್ರೈಸ್ತ ಕುಟುಂಬಗಳು, ದೈವೀಕ ಕುಟುಂಬದ ಪ್ರತಿರೂಪಗಳು ಎಂಬ ವಿಷಯದಲ್ಲಿ ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಐದನೇ ದಿನ ಗುರುವಾರದಂದು ದಿನದ ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ಭಕ್ತಾದಿಗಳಿಗೆ ಪ್ರಬೋಧನೆಯನ್ನು ನೀಡುತ್ತಿದ್ದರು.
ಫೆಬ್ರವರಿ ೨೦ ರಂದು ಆರಂಭಗೊಂಡ ವಾರ್ಷಿಕ ಮಹೋತ್ಸವದ ಕೊನೆಯ ದಿನ ಗುರುವಾರದಂದು ಸಕಲ ಭಕ್ತಾದಿಗಳ ಒಳಿತಿಗಾಗಿ ವಿಶೇಷ ಪೂಜೆ ಪ್ರಾರ್ಥನೆಗಳನ್ನು ನೆರವೇರಿಸಲಾಯಿತು. ದಿನದ ಪ್ರಮುಖ ಬಲಿಪೂಜೆಗಳನ್ನು ಬೆಳ್ತಂಗಡಿಯ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಲಾರೆನ್ಸ್ ಮುಕ್ಕುಝಿಯವರು ಕನ್ನಡ ಭಾಷೆಯಲ್ಲಿ ಹಾಗೂ ವಂದನೀಯ ಮ್ಯಾಕ್ಶಿಮ್ ನೊರೋನ್ಹಾರವರು ಕೊಂಕಣಿ ಭಾಷೆಯಲ್ಲಿ ನೆರವೇರಿಸಿದರು. ದಿನದ ಇತರ ದಿವ್ಯ ಬಲಿಪೂಜೆಗಳನ್ನು ವಂದನೀಯ ಜೇಸನ್ ಮಾರ್ಟಿಸ್, ಬಸ್ರೂರು; ವಂದನೀಯ ಸುನಿಲ್ ವೇಗಸ್, ಕೆರೆಕಟ್ಟೆ; ವಂದನೀಯ ಚಾರ್ಲ್ಸ್ ಮಿನೇಜಸ್, ಉಡುಪಿ ಇವರು ನೆರವೇರಿಸಿದರು.
ದಿನದ ಅಂತಿಮ ಬಲಿಪೂಜೆಯನ್ನು ಸಂಜೆ ೭ ಗಂಟೆಗೆ ಕಲ್ಯಾಣಪುರ ಮಿಲಾಗ್ರಿಸ್ನ ವಂದನೀಯ ವಲೇರಿಯನ್ ಮೆಂಡೊನ್ಸಾ ಇವರು ನೆರವೇರಿಸುವುದರೊಂದಿಗೆ ಮಹೋತ್ಸವದ ಐದನೇ ದಿನದ ಕಾರ್ಯಕ್ರಮಗಳು ಸಂಪನ್ನಗೊಂಡವು.
ಅಂತಿಮ ಬಲಿಪೂಜೆಯ ತರುವಾಯ, ಮಂಟಪದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದ್ದ ಸಂತ ಲಾರೆನ್ಸರ ಪವಿತ್ರ ಅವಶೇಷಗಳನ್ನು ಗೌರವಾದರಗಳಿಂದ ಮೆರವಣಿಗೆಯಲ್ಲಿ ಕೊಂಡೊಯ್ದು ಮತ್ತೆ ಅದರ ಸ್ವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಇದನ್ನು ಪುಣ್ಯಕ್ಷೇತ್ರದ ಮುಖ್ಯಸ್ಥರಾದ ವಂದನೀಯ ಆಲ್ಬನ್ ಡಿಸೋಜಾರವರ ನೇತೃತ್ವದಲ್ಲಿ ನೆರವೇರಿಸಲಾಯಿತು.