ಕುಂದಾಪುರ, ಫೆ 24 (DaijiworldNews/MS): ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿರುವ ಆರೋಪದ ಹಿನ್ನಲೆಯಲ್ಲಿ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ತಕ್ಷಣ ವಜಾಗೊಳಿಸಲು ಆಗ್ರಹಿಸಿ ಕುಂದಾಪುರದ ಸಂಗಮ್ ನಲ್ಲಿರುವ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಫೆ. 24ರ ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯೂ ವಿದ್ಯಾರ್ಥಿನಿಯರಿಗೆ ರಾತ್ರಿ ಅಶ್ಲೀಲ ಸಂದೇಶ ಕಳಿಸುತ್ತಿರುವ ಆರೋಪವಿದ್ದು ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದರೂ ಶಿಸ್ತು ಕ್ರಮ ಜರುಗಿಸದ ಆಡಳಿತ ಮಂಡಳಿ ವಿರುದ್ದ ಸಿಡಿದೆದ್ದಿರುವ
ವಿದ್ಯಾರ್ಥಿಳು ಕಾಲೇಜು ಮುಂಭಾಗ ಧರಣಿ ನಡೆಸಿದ್ದಾರೆ.
ಆರ್ ಓ ವಿರುದ್ದ ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿರುವ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿ ಕಾಲೇಜು ಪ್ರಾಂಶುಪಾಲರು ಶಿಸ್ತುಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಆದರೆ ಪ್ರಾಂಶುಪಾಲರ ಭರವಸೆಗೆ ಜಗ್ಗದ, ಸುಡು ಬಿಸಿಲನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದು, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರನ್ನು ಸ್ಥಳಕ್ಕೆ ಕರೆಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೋಲಿಸರಿಂದ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.