ಉಡುಪಿ, ಫೆ 24 (DaijiworldNews/HR): ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ವಿಚಾರದಲ್ಲಿ ಮತ್ತೆ ಗೊಂದಲ ಉಂಟಾಗಿದ್ದು, ಇಂದು ಹಿಜಾಬ್ ಧರಿಸಿದ ಸ್ನಾತಕೋತ್ತರ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಕ್ಕೆ ಅವಕಾಶ ಕೇಳುತ್ತಿದ್ದು, ಅವರನ್ನು ಪ್ರಾಂಶುಪಾಲರು ಗೇಟಿನಿಂದ ಹೊರಗೆ ಕಳುಹಿಸಿರುವ ಘಟನೆ ನಡೆದಿದೆ.
ನಮಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಮಾಧ್ಯಮಗಳು ನಮ್ಮನ್ನ ತಪ್ಪಾಗಿ ಬಿಂಬಿಸುತ್ತ ಇದೆ. ನಮಗೆ ಶಿಕ್ಷಣ ಬೇಕು. ಆದಷ್ಟು ಬೇಗ ಕೋರ್ಟ್ ತೀರ್ಪು ಕೊಡಲಿ. ಎಂಜಿಎಂ ಕಾಲೇಜು ಸಿಡಿಸಿ ಅಡಿಯಲ್ಲಿ ಬರಲ್ಲ. ಹಿಜಾಬ್ ನೊಂದಿಗೆ ಶಿಕ್ಷಣ ಕಲಿಯಲು ಅವಕಾಶ ಕೊಡಿ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.
ನಮಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಈಗ ತರಗತಿ ಅಟೆಂಡ್ ಆಗಲು ಕೂಡ ಬಿಡುತ್ತಿಲ್ಲ. ನಮಗೆ ಕ್ಯಾಂಪಸ್ ನ ಒಳಗೆ ನಿಲ್ಲಲು ಬಿಟ್ಟಿಲ್ಲ ಎಂದು ಸ್ನಾತಕೋತ್ತರ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.
ಇನ್ನು ಹೈಕೋರ್ಟ್ ಆದೇಶದ ಹೊರತಾಗಿಯೂ ಪದವಿ ವಿದ್ಯಾರ್ಥಿನಿಯರು ಗೊಂದಲದಲ್ಲಿದ್ದು, ಇತ್ತ ಮಾಧ್ಯಮದವರನ್ನು ಕಂಡು ವಿದ್ಯಾರ್ಥಿನಿಯರು ಮನೆಯತ್ತ ಸಾಗಿರುವ ಘಟನೆ ಕೂಡ ನಡೆದಿದೆ.
ಈ ಎಲ್ಲಾ ಘಟನೆಯಿಂದಾಗಿ ಎಂಜಿಎಂ ಕಾಲೇಜಿಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.