ಬೆಳ್ತಂಗಡಿ, ಫೆ 24 (DaijiworldNews/MS): ತಾಲೂಕಿನ ನಾವೂರು ಗ್ರಾಮದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಸಮೀಪದ ಗುಡ್ಡದ ಮೇಲೆ ಉರುವಲು ಸಂಗ್ರಹಿಸುತ್ತಿದ್ದ ವೇಳೆ ಯುವಕನೋರ್ವ ಕತ್ತಿ ಕೇಳುವ ನೆಪದಲ್ಲಿ ಆಕೆಯ ಬಳಿ ಬಂದು ಮಾನಭಂಗಕ್ಕೆ ಯತ್ನಿಸಿದ್ದ ಘಟನೆ ನಡೆದಿದೆ.
ಆರೋಪಿಯನ್ನು ಇಂದಬೆಟ್ಟು ಗ್ರಾಮದ ಲಿಂಗತ್ಯಾರ್ ಹೌಸ್ ನಿವಾಸಿ ಸಂತೋಷ್ (25) ಎಂದು ಗುರುತಿಸಲಾಗಿದೆ.
ಫೆಬ್ರವರಿ 22 ರಂದು ಸಂಜೆ 4 ಗಂಟೆ ಸುಮಾರಿಗೆ ನಾವೂರು ಗ್ರಾಮದ ದೇಸೊಟ್ಟು ಎಂಬಲ್ಲಿನ ವಿವಾಹಿತ ಮಹಿಳೆಯೊಬ್ಬರು ಉರುವಲು ಸಂಗ್ರಹಿಸಲು ಮನೆಯ ಸಮೀಪದ ಗುಡ್ಡಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿಯೂ, ಮಹಿಳೆಯ ಬಳಿ ಇದ್ದ ಕತ್ತಿ ಪಡೆಯುವ ನೆಪದಲ್ಲಿ ಮಾತನಾಡಿದ್ದಾನೆ. ಇದ್ದಕ್ಕಿದ್ದಂತೆ ಆಕೆಯನ್ನು ತನ್ನೆಡೆಗೆ ಎಳೆದುಕೊಂಡು ಮಾನಭಂಗಕ್ಕೆ ಯತ್ನಿಸಿದ್ದಾನೆ. ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದಾಗ, ಘಟನೆಯ ಬಗ್ಗೆ ಬೇರೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಮಹಿಳೆಗೆ ಎಚ್ಚರಿಕೆ ನೀಡಿ ಸ್ಥಳದಿಂದ ತೆರಳಿದ್ದಾನೆ.
ಈ ಬಗ್ಗೆ ಸಂತೋಷ್ ವಿರುದ್ಧ ಬೆಳ್ತಂಗಡಿ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.