ಆರ್.ಬಿ ಜಗದೀಶ್
ಕಾರ್ಕಳ, ಫೆ 24 (DaijiworldNews/MS): ಪಶ್ಚಿಮಘಟ್ಟ ತಪ್ಪಲು ತೀರಾ ಪ್ರದೇಶದಲ್ಲಿ ಪರಿಸರ ಹಾನಿಗೊಳಗಾಗುತ್ತಿವೆ. ಪ್ರಾಕೃತಿಕ ದೃಶ್ಯವನ್ನು ಕಣ್ತುಂಬಿ ವೀಕ್ಷಿಸಲು ಬರುವಂತಹ ಪ್ರವಾಸಿಗರು ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಕ್ಕ ಸಿಕ್ಕಲ್ಲಿ ಎಸೆಯುತ್ತಿದ್ದಾರೆ. ಅಡುಗೆಗಾಗಿ ಬೆಂಕಿಯ ಒಲೆಗಳನ್ನು ಸಿದ್ಧಪಡಿಸುತ್ತಿರುವುದು ಅಲ್ಲಲ್ಲಿ ಕಂಡುತ್ತಿವೆ.
ಬೂದಿ ತುಂಬಿರುವ ಒಲೆಗಳು:
ಪಶ್ಚಿಮಘಟ್ಟವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹೊಣೆ. ಕಡುಬೇಸಿಗೆ ಎದುರುಗೊಂಡಿದ್ದು, ಬೆಂಕಿ ಆಕಸ್ಮಿಕ ಸಂಭವಿಸಿ ಕಾಲ್ಗಿಚ್ಚು ಹರಡುವುದರಿಂದ ಅಪತ್ತು ಕಟ್ಟಿಟ್ಟಬುತ್ತಿ. ಇದರಿಂದ ಅರಣ್ಯ ಸಂಪತ್ತು ನಾಶವಾಗಿ ಅಸಂಖ್ಯಾತ ಪ್ರಾಣಿ,ಪಕ್ಷಿಗಳ ಜೀವಕ್ಕೂ ಕುತ್ತು ಬರಲಿದೆ.
ಪಶ್ವಿಮ ಘಟ್ಟ ಮೂಲಕ ಅರಬ್ಬೀಸಮುದ್ರಕ್ಕೆ ಲೀನವಾಗುವ ಸೌರ್ಪಣಿಕ, ಸೀತಾನದಿ, ಸ್ವರ್ಣ,ನೇತ್ರಾವತಿ, ಕುಮಾರಧಾರ, ಕಾವೇರಿ ನದಿಗಳು ಹರಿದು ಹೋಗುವ ಆನೇಕ ಭಾಗಗಳನ್ನು ನೀರಿನ ಸೆಲೆ ಇರುವ ನದಿ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಯಾಣಿಕರು ಅಲ್ಲಿಯೇ ಕೆಲವು ಹೊತ್ತು ತಂಗುತ್ತಾರೆ. ಅದೇ ಜಾಗದಲ್ಲಿ ಬಿಸಿ ಆಹಾರವನ್ನು ಸಿದ್ಧಪಡಿಸುತ್ತಾರೆ. ಕೆಲ ಪ್ರಯಾಣಿಕರು ಸಿದ್ಧಪಡಿಸಿದ ತಂದ ಆಹಾರವನ್ನು ತಿಂದು ಮಿಕ್ಕಿ ಉಳಿದ ಆಹಾರ ಸಹಿತ ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಸಿಕ್ಕ ಸಿಕ್ಕಲ್ಲಿ ಎಸೆದು ಹೋಗುತ್ತಿದ್ದಾರೆ.
ಕೆಲವರು ಹೊಗೆಬತ್ತಿ ಹೊತ್ತಿಸಲು ಬೆಂಕಿಪಟ್ಟಣವನ್ನು ಇದೇ ಸಂರಕ್ಷಣ ಪ್ರದೇಶದಲ್ಲಿ ಉಪಯೋಗಿಸುತ್ತಿದ್ದಾರೆ. ಹೊಗೆಬತ್ತಿಯ ಉಳಿದಿರುವ ಭಾಗವನ್ನು ಎಸೆದು ಹೋಗುತ್ತಾರೆ. ಅದ್ದರಿಂದ ಅಲ್ಲಿ ಒಣಗಿ ಬಿದ್ದಿರುವ ಹುಲ್ಲುಗಳು, ತರಗೆಲೆ, ಒಣಕಟ್ಟಿಗೆಗಳಿಗೆ ಬೆಂಕಿ ಸ್ವರ್ಶವಾಗಿ ಕಾಲ್ಗಿಚ್ಚು ಎದುರಾಗುವ ಸಂಭವಿ ಇದೆ.
ಕೆಲವು ಕಡೆಗಳಲ್ಲಿ ಪ್ರಯಾಣಿಕರು ನೀಡುತ್ತಿರುವ ಆಹಾರಕ್ಕಾಗಿ ಪ್ರಾಣಿಗಳು ಹಪಹಪಿಸುತ್ತಿವೆ. ಅವುಗಳಲ್ಲಿ ಸಿಂಗಳಿಕ, ಮಂಗಗಳು ಪ್ರಮುಖವಾಗಿದೆ. ಮಾನವನ ಸಂಪರ್ಕ ಇವುಗಳಿಗೆ ಹೆಚ್ಚಾಗುತ್ತಿದ್ದಂತೆ ಇವುಗಳು ಕಾಡು ಬಿಟ್ಟು ನಾಡಿಗೆ ಅತಿಕ್ರಮಿಸಿ ಬೆಳೆಗಳನ್ನು ನಾಶಪಡಿಸುತ್ತಿವೆ. ಕೆಲವೊಂದು ಮಂಗಗಳು ಮಾನವ ತಿಂದು ಎಸೆದ ಪ್ಲಾಸ್ಟಿಕ್ ತೊಟ್ಟೆಗಳನ್ನು ಎಳೆದೊಯ್ದು ದಟ್ಟ ಅರಣ್ಯ ಪ್ರದೇಶಕ್ಕೆ ಕೊಂಡು ಹೋಗಿ ಎಸೆಯುತ್ತಿವೆ. ಇನ್ನು ಕೆಲ ಪ್ರಾಣಿಗಳು ಆಹಾರಕ್ಕೆ ಹಾತೊರೆಯುತ್ತಾ ಪ್ಲಾಸ್ಟಿಕ್ ಕವರ್ಗಳನ್ನೇ ತಿಂದು ಜೀರ್ಣಿಸಿಕೊಳ್ಳಲಾಗದೇ ಸಾವನೊಪ್ಪುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಘಟ್ಟಗಳಲ್ಲೂ ಇದೇ ಸಮಸ್ಯೆ:
ಕರಾವಳಿ ಭಾಗವನ್ನು ಸಂಪರ್ಕಿಸುವ ಹುಲೀಕಲ್,ಅಗುಂಬೆ, ಕುದುರೆಮುಖ, ಚಾರ್ಮಾಡಿ, ಶಿರಾಡಿ ಘಟ್ಟಗಳಲ್ಲೂ ಇದೇ ಸಮಸ್ಸೆ ಎದುರಾಗಿದೆ. ಸೂರ್ಯಸ್ತಮಾನ ವೀಕ್ಷಣೆ, ಜಲಪಾತ ವೀಕ್ಷಣೆ, ಅರಣ್ಯ ವೀಕ್ಷಣೆಗೆಂದು ಬರುವಂತಹ ಪ್ರಯಾಣಿಕರು ಪರಿಸರ ಸಂರಕ್ಷಣೆಯ ಜಾಗೃತಿ ವಹಿಸದೇ ಹೋದುದರಿಂದ ಈ ಎಲ್ಲಾ ಸಮಸ್ಸೆಗಳು ಎದುರಾಗುತ್ತಿವೆ.
ವಧಾ ಕೇಂದ್ರಗಳಿಂದ ತ್ಯಾಜ್ಯ:
ವಧಾ ಕೇಂದ್ರಗಳಿಂದ ತ್ಯಾಜ್ಯವನ್ನು ಇದೇ ಪರಿಸರದಲ್ಲಿ ಎಸೆಯುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಆಹಾರ ಹುಡುಕಿ ಬರುತ್ತಿರುವ ಕಾಡುಪ್ರಾಣಿಗೆ ಇದು ಉಪಯೋಗವಾಗಬಹುದಾದರೂ ಇದರಿಂದ ಪರಿಸರಕ್ಕೆ ಮಾರಕವಾಗಿದೆ. ಎಸೆದಿರುವ ತ್ಯಾಜ್ಯವು ಕೊಳೆದು ದುರ್ವಾಸನೆ ಬೀರಿ ಸಾಂಕ್ರಾಮಿಕ ರೋಗಗಳು ಹಬ್ಬಬಹುದು.
ಕಾಡುಗಳು ಮಾನವ ಬದುಕಿಗೆ ಪ್ರಮುಖವಾದುದು:
ಕಾಡುಗಳು ಪರಿಸರ ಸಮಾತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೆಂಕಿ ಬಳಕೆ ನಿಷಿದ್ಧವಾಗಿದೆ. ಕಾಡುಗಳ ವೀಕ್ಷಣೆ ಮಾಡುವ ಪ್ರವಾಸಿಗರು ಯಾವುದೇ ಕಾರಣಕ್ಕೂ ಕಾಡುಪ್ರಾಣಿಗಳಿಗೆ ಆಹಾರ ನೀಡಲು ಮುಂದಾಗಬಾರದು. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಕಾಡು ಹಾಗೂ ಅದರಲ್ಲಿ ಇರುವ ಪ್ರಾಣಿಗಳ ಸಂಸತಿ ನಶಿಸುತ್ತದೆ. -ರುಥ್ರೇನ್, ಡಿಸಿಎಫ್ ಕುದುರೆಮುಖ ವನ್ಯಜೀವ ವಿಭಾಗ
ಪ್ರಾಕೃತಿಕ ದುರಂತಕ್ಕೆ ಮಾನವನೇ ಮುನ್ನುಡಿ:
ಪಶ್ಚಿಮಘಟ್ಟವು ಮೋಜು ಗೌಜಿಗೆ ಸೀಮಿತವಾಗಿದೆ. ಪಶ್ಚಿಮಘಟ್ಟದ ಜೀವ ವೈದಿದ್ಯತೆ ಸಂಕುಲತೆಗೆ ಮತ್ತು ಮಾನವನಿಗೆ ಎಷ್ಟು ಚೇತನ ಶಕ್ತಿ ನೀಡುತ್ತಿದೆ ಎಂಬುವುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಸರಕಾರ,ಜನಪ್ರತಿನಿಧಿಗಳು ಹಾಗೂ ಪ್ರಜೆಗಳು ದಿವ್ಯನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನದಿ ಮೂಲಗಳಿಗೆ ಟನ್ಗಟ್ಟಲೆಯಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳು ಲೀನವಾಗುತ್ತಿವೆ. ಕಾಡ್ಗಿಚ್ಚುಗೆ ಕಾರಣವಾಗಿರುವ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ವಸ್ತುವಿನಿಂದ ನದಿ ಮೂಲವೇ ಬತ್ತಿ ಹೋಗಲಿದೆ. ಅರಣ್ಯ ಇಲಾಖೆಗೆ ಪೂರಕ ಪರಿಕರಗಳನ್ನು ಒದಗಿಸಬೇಕು. ಪ್ಲಾಸ್ಟಿಕ್ ಸಹಿತ ತ್ಯಾಜ್ಯ ಎಸೆಯುವ ಪ್ರಯಾಣಿಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಗರಕ್ಕೆ ಬೇಕಾದ ಸಂಪತ್ತುಗಳು ಇದೇ ಪಶ್ಚಿಮಘಟ್ದ ಕಾಡುಗಳಿಂದ ಲಭಿಸುತ್ತಿದೆ. ಪರಿಸರದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಪ್ರಾಕೃತಿಕ ದುರಂತಕ್ಕೆ ಮಾನವನೇ ಮುನ್ನುಡಿಯಾಗಲಿದ್ದಾನೆ. -ದಿನೇಶ್ ಹೊಳ್ಳ, ಪರಿಸರವಾದಿ, ಸಹ್ಯಾದ್ರಿ ಸಂಚಯ ಮಂಗಳೂರು