ಕಾರ್ಕಳ, ಫೆ. 23 (DaijiworldNews/SM): ಕುಟುಂಬದಲ್ಲಿ ಆರಂಭಗೊಂಡ ಮಾನವ ಜೀವ ಮತ್ತು ಜೀವನವು ಕುಟುಂಬದಲ್ಲಿಯೇ ಕೊನೆಗೊಳ್ಳುವುದರಿಂದ ಮಾನವನ ಅಸ್ತಿತ್ವ ಹಾಗೂ ಸಾಧನೆಗಳ ಆಗರ ಕುಟುಂಬವೇ ಆಗಿದೆ. ಆಧುನಿಕ ಕಾಲದಲ್ಲಿ ಕುಟುಂಬದ ಮೌಲ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುವುದರಿಂದ ಪ್ರತಿಯೊಬ್ಬರೂ ಕುಟುಂಬದ ಉಳಿಯುವಿಕೆಗೆ ಪ್ರಯತ್ನಪಡುವುದು ಅನಿವಾರ್ಯ ಎಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅಭಿಪ್ರಾಯಪಟ್ಟಿದ್ದಾರೆ.
ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ನಾಲ್ಕನೇ ದಿನ ಬುಧವಾರದಂದು ಪ್ರಮುಖ ಬಲಿಪೂಜೆಯನ್ನು ಅರ್ಪಿಸಿ ಪ್ರಬೋಧನೆಯನ್ನು ನೀಡಿದರು.
ಫೆಬ್ರವರಿ 20ರಂದು ಆರಂಭಗೊಂಡ ವಾರ್ಷಿಕ ಮಹೋತ್ಸವವು ನಾಲ್ಕನೇ ದಿನದಂದು ಕುಟುಂಬಗಳ ಏಳಿಗೆಗಾಗಿ ವಿಶೇಷವಾಗಿ ಪೂಜೆ ಪ್ರಾರ್ಥನೆಗಳನ್ನು ನೆರವೇರಿಸಲಾಯಿತು.
ದಿನದ ಪ್ರಮುಖ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾರವರು ನೆರವೇರಿಸಿದರು. ದಿನದ ಇತರ ಬಲಿಪೂಜೆಗಳನ್ನು ವಂದನೀಯ ಜೊನ್ ಬಾರ್ಬೊಜಾ, ಪಿಲಾರು, ವಂದನೀಯ ಜೊಯ್ ಜೊಲ್ಸನ್ ಅಂದ್ರಾದೆ, ಶಿವಮೊಗ್ಗ; ವಂದನೀಯ ಮ್ಯಾಕ್ಸಿಮ್ ಡಿಸೋಜಾ, ಮಂಗಳೂರು ಇವರು ನೆರವೇರಿಸಿದರು.
ದಿನದ ಅಂತಿಮ ಬಲಿಪೂಜೆಯನ್ನು ವಂದನೀಯ ರೊಯ್ಸನ್ ಡಿ’ಸೋಜಾ, ಸಂಪಾದಕರು ’ಉಜ್ವಾಡ್’ ಇವರು ನೆರವೇರಿಸುವುದರೊಂದಿಗೆ ಮಹೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮಗಳಿಗೆ ತೆರೆ ಬಿದ್ದಿತು.
ಮಾಜಿ ಶಾಸಕರು ಹಾಗೂ ಮಂತ್ರಿಗಳಾದ ಶ್ರೀ ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಅಭಯ ಚಂದ್ರ ಜೈನ್ ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತು ಪ್ರಾರ್ಥಿಸಿದರು.
ಮಹೋತ್ಸವದ ಐದನೇ ಮತ್ತು ಅಂತಿಮ ದಿನ ಗುರುವಾರ ಬೆಳಿಗ್ಗೆ 8 ಗಂಟೆ, 10 ಗಂಟೆ, 12 ಗಂಟೆ ಹಾಗೂ ಮಧ್ಯಾಹ್ನ 2ಗಂಟೆ, 4ಗಂಟೆ, ಮತ್ತು 7 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಸಂಜೆ 4 ಗಂಟೆಯ ವಿಶೇಷ ಸಾಂಭ್ರಮಿಕ ಬಲಿಪೂಜೆಯನ್ನು ಬೆಳ್ತಂಗಡಿಯ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಲಾರೆನ್ಸ್ ಮುಕ್ಕುಝಿಯವರು ನೆರವೇರಿಸಿ ಪ್ರಬೋಧನೆ ನೀಡಲಿದ್ದಾರೆ.