ಉಡುಪಿ, ಫೆ 23 (DaijiworldNews/KP): ಉಡುಪಿಯ ಬಿಆರ್ ಶೆಟ್ಟಿ ಹೆರಿಗೆ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಿನಿಂದ ವೇತನ ನೀಡದಿರುವುದನ್ನು ಖಂಡಿಸಿ 153 ಸಿಬ್ಬಂದಿಗಳು ಫೆ.23ರಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಸರ್ಕಾರ ಮತ್ತು ಬಿಆರ್ ಶೆಟ್ಟಿ ಕಂಪನಿಯ ನಡುವಿನ ತಿಕ್ಕಾಟದಿಂದ 153 ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿಭಟನೆಯಲ್ಲಿ ಖಾಲಿ ಗೃಹೋಪಯೋಗಿ ವಸ್ತು ಹಾಗೂ ಪಾತ್ರೆಯನ್ನು ಪ್ರದರ್ಶಿಸಿ ತಮಗೆ ಬಂದಿರು ದುಸ್ಥಿತಿಯನ್ನು ತೊರಿಕೊಂಡರು.
ಸರ್ಕಾರ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯ ತಿಕ್ಕಾಟದಿಂದ ನಮ್ಮನ್ನು ಅನಾಥರನ್ನಾಗಿಸಿದೆ. ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ, ಮನೆಯಲ್ಲಿ ನಮ್ಮ ವೇತನವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ, ಇದರಿಂದ ನಾವು ಸಾಕಷ್ಟು ಕಷ್ಟಪಡಬೇಕಾಗಿದೆ, ಅದರಿಂದ ನಮ್ಮ ಸಂಬಳವನ್ನು ಬಿಡುಗಡೆ ಮಾಡುವಂತೆ ಧರಣಿ ನಿರತ ಸಿಬ್ಬಂದಿ ಮನವಿ ಮಾಡಿದರು.
ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಅಧ್ಯಕ್ಷ ನಿತ್ಯಾನಂದ ವೊಳಕಾಡು, ಸರಕಾರದ ನಿರಾಸಕ್ತಿಯಿಂದ ಇಲ್ಲಿನ 153ಕ್ಕೂ ಹೆಚ್ಚು ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂದೆ ಇಲ್ಲಿ ಹೆರಿಗೆ ಆಸ್ಪತ್ರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಅಲ್ಲದೆ ನೂತನವಾಗಿ ನಿರ್ಮಾಣಗೊಂಡಿರುವ ಆಸ್ಪತ್ರೆ ಆರಂಭದಲ್ಲಿ ಉತ್ತಮ ಸೇವೆ ನೀಡುತ್ತಾ ಬಂದಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಹಲವು ಸಮಸ್ಯೆಗಳು ಸೃಷ್ಟಿಯಾಗಿದೆ ಎಂದು ಹೇಳಿದರು.