ಕಾಸರಗೋಡು, ಫೆ. 22 (DaijiworldNews/SM): ಕುಂಬಳೆ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಿಪಿಎಂ ಸದಸ್ಯ ಕೊಗ್ಗು ರಾಜೀನಾಮೆ ನೀಡಿದ್ದಾರೆ.
ವೈಯುಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿರುವುದಾಗಿ ರಾಜೀನಾಮೆ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗೆ ಹಸ್ತಾಂತರಿಸವುದಾಗಿ ಸ್ಪಷ್ಟ ಪಡಿಸಿದ್ದಾರೆ. ಯುಡಿಎಫ್ ಅಧಿಕಾರದಲ್ಲಿರುವ ಕುಂಬಳೆ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಮತ್ತು ಸಿಪಿಎಂ ನಡುವಿನ ಅಪವಿತ್ರ ಮೈತ್ರಿಯಿಂದ ಬಿಜೆಪಿ ಎರಡು ಹಾಗೂ ಸಿಪಿಎಂ ಒಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಪಡೆದಿತ್ತು.
ಸಿಪಿಎಂ ಗೆ ಬಿಜೆಪಿ ಬೆಂಬಲ ನೀಡಿದ ಬಗ್ಗೆ ಬಿಜೆಪಿಯಲ್ಲಿ ಕೆಲ ಸಮಯಗಳಿಂದ ಅಂತಃ ಕಲಹ ಉಂಟಾಗಿದ್ದು, ಫೆ. ೨೦ರಂದು ಅತೃಪ್ತ ಬಿಜೆಪಿಯ ಕಾರ್ಯಕರ್ತರು ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದ ಘಟನೆಯೂ ನಡೆದಿತ್ತು. ಕೊಗ್ಗು ಬಿಜೆಪಿ ಕಾರ್ಯಕರ್ತರೋರ್ವರ ಕೊಲೆ ಪ್ರಕರಣದಲ್ಲಿ ಆರೋ ಪಿಯಾಗಿರುವುದರಿಂದ ಇವರಿಗೆ ಬೆಂಬಲ ನೀಡಿದ ಬಿಜೆಪಿಯ ಕೆಲ ಮುಖಂಡರ ತೀರ್ಮಾನದ ವಿರುದ್ಧ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು.
ಕೊಗ್ಗುರ ಸದಸ್ಯತ್ವ ರದ್ದುಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಬಿಜೆಪಿ ಕಾರ್ಯಕರ್ತ ವಿನು ರವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಗ್ಗು ಸೇರಿದಂತೆ ಏಳು ಮಂದಿ ಗೆ ಏಳು ವರ್ಷ ಸಜೆ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಫು ನೀಡಿತ್ತು.