ಕಾರ್ಕಳ, ಫೆ 22 (DaijiworldNews/KP): ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಎರಡನೇ ದಿನ ಸೋಮವಾರದಂದು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ಪ್ರಬೋಧನೆ ನೀಡಿದ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಲೋಬೊ ಅವರು, ನಮ್ಮನ್ನು ಈ ಲೋಕಕ್ಕೆ ತಂದು, ಲಾಲನೆ-ಪಾಲನೆಗೈದು, ಬೆಳೆಸಿ ಒಳ್ಳೆಯ ವ್ಯಕ್ತಿಗಳನ್ನಾಗಿಸಿ ನಮ್ಮ ಭವಿಷ್ಯವನ್ನು ರೂಪಿಸುವ ನಮ್ಮ ತಂದೆ-ತಾಯಂದಿರು ದೈವಸ್ವರೂಪಿಗಳು. ಅವರನ್ನು ಗೌರವಿಸಿ ಸನ್ಮಾನಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ಫೆಬ್ರವರಿ 20 ರಂದು ಆರಂಭಗೊಂಡ ವಾರ್ಷಿಕ ಮಹೋತ್ಸವವು ಎರಡನೇ ದಿನವಾದ ಸೋಮವಾರದಂದು ಭಕ್ತಾದಿಗಳ ನಿರಂತರ ಆಗಮನದಿಂದ ಕಳೆಗಟ್ಟಿತ್ತು. ದಿನದ ಪ್ರಮುಖ ಏಕೈಕ ಬಲಿಪೂಜೆಯನ್ನು ಉಡುಪಿಯ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊರವರು ನೆರವೇರಿಸಿ ಪ್ರಬೋಧನೆ ನೀಡಿದರು.
ಇನ್ನು ಮಹೋತ್ಸವದ ಎರಡನೇ ದಿನ ತಂದೆ ತಾಯಂದಿರಿಗಾಗಿ ಮೀಸಲಾಗಿಡಲಾಗಿದ್ದು, ತಂದೆ ತಾಯಿಗಳು ಮತ್ತು ಪೋಷಕರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತ್ತು. ಈ ವೇಳೆ ಹಲವಾರು ಹಿರಿಯ ದಂಪತಿಗಳು ಹಾಜರಿದ್ದು, ಯುವಜನರು ತಮ್ಮ ವೃದ್ಧ ಪೋಷಕರನ್ನು ಕೈಹಿಡಿದು ಕರೆತರುವ ದೃಶ್ಯ ವಿಶೇಷವಾಗಿತ್ತು.
ದಿನದ ಬಲಿಪೂಜೆಗಳನ್ನು ರಾಜೇಶ್ ಪಸನ್ಹ.ಕಟಪಾಡಿ, ಹ್ಯಾರಿ ಡಿಸೋಜಾ.ಕಯ್ಯಾರ್, ಮನೋಜ್ ಡಿಸೋಜಾ.ನಿಟ್ಟೆ, ಪಾವ್ಲ್ ರೇಗೊ.ಮಿಯ್ಯಾರು ಇವರು ನೆರವೇರಿಸಿದರು.
ದಿನದ ಅಂತಿಮ ಬಲಿಪೂಜೆಯನ್ನು ವಂದನೀಯ ಬೇಸಿಲ್ ವಾಸ್, ಮಡಂತ್ಯಾರು ಸಂಜೆ 7 ಗಂಟೆಗೆ ನೆರವೇರಿಸಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಿದರು.
ಇನ್ನು ಉಡುಪಿಯ ಜಿಲ್ಲಾಧಿಕಾರಿ ಶ್ರೀಯುತ ಕೂರ್ಮಾ ರಾವ್ರವರು ಮಹೋತ್ಸವದ ಮೊದಲನೇ ದಿನ ಭಾನುವಾರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಮಹೋತ್ಸವದ ಮೂರನೇ ದಿನ ಮಂಗಳವಾರ ಬೆಳಿಗ್ಗೆ 8.10.12 ಹಾಗೂ ಮಧ್ಯಾಹ್ನ 2, 4 ಮತ್ತು 7 ಗಂಟೆಗೆ ಬಲಿಪೂಜೆಗಳು ನೆರವೇರಲಿದೆ.