ಉಡುಪಿ, ಫೆ 22 (DaijiworldNews/KP): ಹಿಜಾಬ್ ವಿವಾದ ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆಯಲ್ಲಿ ಶಾಸಕ ರಘುಪತಿ ಭಟ್ ಕೈವಾಡ ಇದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆರೋಪಿಸಿದೆ.
ವಿದ್ಯಾರ್ಥಿನಿ ಶಿಫಾ ಅವರ ಸಹೋದರ ಸೈಫ್ ಮೇಲೆ ತಂಡದಿಂದ ಹಲ್ಲೆ ಪ್ರಕರಣ ನಡೆದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಫ್ಐ ಜಿಲ್ಲಾಧ್ಯಕ್ಷ ಅಸೀಲ್ ಅಕ್ರಂ, ಶಾಸಕ ರಘುಪತಿ ಭಟ್ ಕೈವಾಡ ಇದೆ ಎಂದು ಆರೋಪಿಸಿದ್ದು, ಕೆಲವರು ಬಿಸ್ಮಿಲ್ಲಾ ಹೋಟೆಲ್ಗೆ ತೆರಳದಂತೆ ಜನರನ್ನು ಒತ್ತಾಯಿಸುತ್ತಿದ್ದಾರೆ ಎಂದರು.
ಅಲ್ಲದೆ ಸೈಫ್ಗೆ ಈ ಹಿಂದೆಯೇ ಬೆದರಿಕೆ ಹಾಕಲಾಗಿತ್ತು, ಆದರೆ ನಿನ್ನೆ ಅವರು ಹೋಟೆಲ್ ಮುಚ್ಚುವ ಸಮಯದಲ್ಲಿ 50 ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಹಾಗೂ ಆತನ ಮೇಲೆ ಆರು ಜನರು ಹಲ್ಲೆ ಮಾಡಿದ್ದಾರೆ ಎಂದರು
ಇನ್ನು ಖಾಸಗಿ ಟೆಲಿವಿಷನ್ ಚಾನೆಲ್ನ ಕ್ಯಾಮರಾದಲ್ಲಿ ಬಿಸ್ಮಿಲ್ಲಾ ಹೋಟೆಲ್ ಮೇಲೆ ದಾಳಿ ನಡೆಸಿದ ಚಿತ್ರಣವು ಸೆರೆಯಾಗಿದ್ದು, ಈ ವೀಡಿಯೋವನ್ನು ಪ್ರಸಾರ ಮಾಡಿದ ನಂತರ ಹೈದರ್ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಹಿಜಾಬ್ ವಿಚಾರಕ್ಕೆ ಯಾವುದೇ ಸಂಬಂಧವಿಲ್ಲ. ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ಕೇಳಿ ಅಷ್ಟೇ. ಇದುವರೆಗೆ ಹೈಕೋರ್ಟ್ನಲ್ಲಿ ನಡೆಯುತ್ತಿರುವ ವಾದಗಳು ನಮ್ಮ ಪರವಾಗಿವೆ. ತೀರ್ಪು ನಮ್ಮ ಪರವಾಗಿ ಬರುತ್ತದೆ ಎಂಬ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಘಟನೆಯ ಕುರಿತು ಮಲ್ಪೆ ಠಾಣೆಯಲ್ಲಿ ದಾಖಲಿಸಿಲಾಗಿದ್ದು, ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಇಲ್ಲವಾದರೆ ಸಿಎಫ್ಐ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.