ಮಂಗಳೂರು, ಫೆ 21 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆ ಅಂದರೆ ಬಹಳಷ್ಟು ಜನ ಹೇಳೋದು ಇದೊಂದು ಕೋಮು ಸೂಕ್ಷ್ಮ ಪ್ರದೇಶ, ಗಲಭೆ ದಲ್ಲುರಿಯ ಜಿಲ್ಲೆಯೆಂದು. ಆದರೆ, ನೈಜತೆ ಏನೆಂದರೆ ಈ ಜಿಲ್ಲೆಯು ಸೌಹಾರ್ದತೆಗೆ ಹೆಸರುವಾಸಿಯಾಗಿದೆ ಎಂಬುದು ಹೊರಜಗತ್ತಿಗೆ ಕಾಣದ ವಿಚಾರ. ಇಲ್ಲಿ ಪ್ರತಿಯೊಬ್ಬರೂ ಅವರವರ ಧರ್ಮವನ್ನು ಆಚರಿಸಿಕೊಂಡು ಹೋಗುವಾಗ ಇತರ ಧರ್ಮೀಯರೂ ಕೈ ಜೋಡಿಸೋದು ಇಲ್ಲಿನ ವಾಡಿಕೆ. ಅನಾದಿಕಾಲದಿಂದಲೂ ಹಿಂದೂಗಳ ಕಾರ್ಯಕ್ರಮಕ್ಕೆ ಮುಸಲ್ಮಾನರು ಭಾಗವಹಿಸೋದು, ಮುಸಲ್ಮಾನರ ಕಾರ್ಯಕ್ರಮದಲ್ಲಿ ಹಿಂದೂಗಳು ಭಾಗವಹಿಸೋದು ನಡೆಯುತ್ತಲೇ ಇದೆ. ಈ ವಾಡಿಕೆ ಈಗಲೂ ಮಂಗಳೂರು ನಗರ ಹೊರವಲಯದ ನೀರು ಮಾರ್ಗದ ಪುಟ್ಟ ಗ್ರಾಮ ಬಿತ್ತ್ ಪಾದೆ ಎಂಬಲ್ಲಿ ಜೀವಂತವಾಗಿಡುವ ಕಾರ್ಯ ನಡೆಯುತ್ತಿದೆ.
"ಬಿತ್ತ್ ಪಾದೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಕಳೆದ 49 ವರ್ಷಗಳಿಂದ 7 ದಿನಗಳ ವಾರ್ಷಿಕ ಮುಹಿಯುದ್ದೀನ್ ರಾತಿಬ್ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮದ ವಿಶೇಷತೆಯೇನೆಂದರೆ ಮಸೀದಿಯ ರಾತಿಬ್ ಅನ್ನಪ್ರಸಾದ ಭೋಜನದಲ್ಲಿ ಮೊದಲ ಆದ್ಯತೆಯನ್ನು ಹಿಂದೂ ಮತ್ತು ಕ್ರೈಸ್ತ ಬಾಂಧವರಿಗೆ ನೀಡಲಾಗುತ್ತದೆ. ಆ ಬಳಿಕ ಮುಸಲ್ಮಾನ ಸ್ವ ಧರ್ಮೀಯರು ಅನ್ನಪ್ರಸಾದವನ್ನು ಸ್ವೀಕರಿಸುತ್ತಾರೆ. ಈ ಅನ್ನಪ್ರಸಾದ ಸೇವೆಯು ಭಾರತೀಯ ಸಂಸ್ಕೃತಿಯಂತೆ ಬಾಳೆ ಎಲೆಯ ಮೂಲಕವೇ ನೀಡಲಾಗುತ್ತಿದ್ದು, ಮಸೀದಿಯ ಸಂಪ್ರದಾಯದಲ್ಲಿ ಬಾಳೆ ಎಲೆಯಲ್ಲಿ ಪ್ರಸಾದ ನೀಡುತ್ತಿರುವುದು ಇತಿಹಾಸವೇ ಆಗಿದೆ" ಎಂದು ಮಸೀದಿ ಅಧ್ಯಕ್ಷರಾದ ಶಮೀರ್ ಹೇಳಿದ್ದಾರೆ.
"ಮಸೀದಿಯಲ್ಲಿ ಹಿಂದೂ ಬಾಂಧವರಿಗೆ ಮೊದಲ ಆದ್ಯತೆಯನ್ನು ನೀಡಿದರೆ ಅಂತೆಯೇ ಬಿತ್ತ್ ಪಾದೆ ಊರಿನಲ್ಲಿ ಎರಡು ಪ್ರಮುಖ ದೇವಸ್ಥಾನಗಳಿದ್ದು, ಇಲ್ಲಿನ ಜಾತ್ರಾ ವೇಳೆ ಮುಸ್ಲಿಂ ಮತ್ತು ಕ್ರೈಸ್ತ ಬಾಂಧವರು ಹರಕೆ ಸೇವೆಯನ್ನು ನೀಡುವುದು ಮಾತ್ರವಲ್ಲದೆ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಕ್ತಿ ಭಾವದಿಂದ ಪಾಲ್ಗೊಳ್ಳುತ್ತಾರೆ. ದೇವನೊಬ್ಬನೇ ನಾಮ ಹಲವು ಎಂಬ ಮಾತಿನಂತೆ ಇಲ್ಲಿ ಪ್ರತಿಯೊಬ್ಬರೂ ಎಲ್ಲಾ ಧರ್ಮದ ದೇವರನ್ನು ಪೂಜಿಸುತ್ತಾರೆ. ಹಿಂದೂಗಳ ಆರಾಧ್ಯ ನಂಬಿಕೆ ದೈವದ ವಾರ್ಷಿಕ ಕೋಲೋತ್ಸವದಲ್ಲೂ ಮುಸಲ್ಮಾನರಿಗೆ ಮೊದಲ ಬೂಲ್ಯ ಪ್ರಸಾದವನ್ನು ನೀಡುವುದು ಇಲ್ಲಿನ ವಾಡಿಕೆ. ಈ ಸೌಹಾರ್ದಯುತ ಜೀವನದಿಂದಾಗಿ ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಧರ್ಮದ ಮುಖಂಡರು ಜವಬ್ದಾರಿ ವಹಿಸಿದ್ದಾರೆ" ಎಂದು ಸ್ಥಳೀಯರಾದ ಪದ್ಮನಾಭ್ ಹೇಳಿದ್ದಾರೆ.
ಇನ್ನು ಜಾತಿ ಧರ್ಮದ ವಿಷ ಬೀಜ ಬಿತ್ತಿ ಮನಸ್ಸು ಮನಸ್ಸುಗಳನ್ನು ಒಡೆಯುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಬಿತ್ತ್ ಪಾದೆ ಗ್ರಾಮದ ಜನರು ಜೀವನ ನಡೆಸುತ್ತಿರುವುದು ನಿಜವಾಗಿಯೂ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.