ಬಂಟ್ವಾಳ, ಫೆ 21 (DaijiworldNews/KP): ರಾಜ್ಯ ಪೊಲೀಸ್ ಇಲಾಖೆಗೆ 2020ರಲ್ಲಿ ಪಿಎಸ್ಐ ಆಗಿ ಆಯ್ಕೆಯಾಗಿರುವ ಬಂಟ್ವಾಳ ಮೂಲದ ಕು.ನಿಧಿ ಬಿ.ಎನ್. ಅವರು ಕಲಬುರ್ಗಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ನಡೆದ ತರಬೇತಿಯಲ್ಲಿ ಅತ್ಯುತ್ತಮ ಆಲ್ರೌಂಡರ್ ಪ್ರಶಸ್ತಿ ಹಾಗೂ ಮಹಿಳಾ ಹೊರಾಂಗಣ ವಿಭಾಗದ ಅತ್ಯುತ್ತಮ ನಿರ್ವಹಣ ಪ್ರಶಸ್ತಿ ಪಡೆದಿದ್ದಾರೆ.
ನೂತನವಾಗಿ ಆಯ್ಕೆಯಾದವರಿಗೆ 11 ತಿಂಗಳ ತರಬೇತಿಯನ್ನು ನೀಡಲಾಗಿದ್ದು, ಫೆ. 19ರಂದು ತರಬೇತಿಯ ನಿರ್ಗಮನ ಪಥಸಂಚಲನದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಖಡ್ಗ, ಟ್ರೋಫಿ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದರು.
ಬಂಟ್ವಾಳ ತಾಲೂಕಿನ ಸೊರ್ನಾಡು ಬಂಡಸಾಲೆಯ ನಿಧಿ ಅವರು ಬಂಟ್ವಾಳ ಎಸ್ವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ನಾರಾಯಣ ಭಂಡಾರಿ ಬೊಟ್ಯಾಡಿ ಮತ್ತು ಬಂಟ್ವಾಳ ಬಿಎಸ್ಎನ್ಎಲ್ನ ನಿವೃತ್ತ ಅಧಿಕಾರಿ ಯಶೋದಾ ದಂಪತಿಯ ಪುತ್ರಿ. ಎಸ್ವಿಎಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ 7ನೇ ರ್ಯಾಂಕ್ ಪಡೆದಿದ್ದ ಅವರು ಕೆಎಎಸ್ ಪರೀಕ್ಷೆ ಬರೆದಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಸಮಾರಂಭದಲ್ಲಿ ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ ಪಾಟೀಲ್ ರೇವೂರ್, ಶಾಸಕ ಬಸವರಾಜ ಮತ್ತಮೂಡ, ವಿಧಾನ ಪರಿಷತ್ ಸದಸ್ಯ ಶಶೀಲ.ಜಿ, ನಮೋಶಿ, ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್, ಈಶಾನ್ಯ ವಲಯದ ಐಜಿಪಿ ಮುನೀಶ್ ಖರ್ಬೀಕರ್, ನಗರದ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ್, ಡಿಸಿಪಿ ಅಡ್ಡೂರು ಶೀನಿವಾಸಲು, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಜಿ.ಕೆ.ರಶ್ಮಿ, ಜೆಸ್ಕಾಂ ಎಸ್ಪಿ ಸವಿತಾ ಹೂಗಾರು ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಕೆಎಸ್ ಆರ್ ಪಿ ಕುಮಾಂಡೆಂಟ್ ಬಸವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.