ಉಪ್ಪಿನಂಗಡಿ, ಫೆ 17 (DaijiworldNews/MS): ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ಅವಕಾಶ ನೀಡದಿರುವುದನ್ನು ವಿರೋಧಿಸಿ ಅವರ ಬೆಂಬಲವಾಗಿ ಒಂದಷ್ಟು ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿದ ಘಟನೆ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ವಿದ್ಯಾರ್ಥಿಗಳ ಗುಂಪು ತರಗತಿ ಬಹಿಷ್ಕರಿಸಿದ ಬೆನ್ನಲ್ಲೇ ಮತ್ತಷ್ಟು ಗೊಂದಲ ಸೃಷ್ಟಿಯಾಗುವುದನ್ನು ತಡೆಯಲು ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿಗೆ ಎರಡು ದಿನಗಳ ಕಾಲ ರಜೆ ಸಾರಲಾಗಿದೆ.
ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜು ಕೊಠಡಿಯೊಳಗೆ ಸಮವಸ್ತ್ರ ಮಾತ್ರ ಬಳಸಲು ಅವಕಾಶವೆಂದು ಪ್ರಾಂಶುಪಾಲರು ಸರ್ಕಾರದ ಮತ್ತು ನ್ಯಾಯಾಲಯದ ಆದೇಶವನ್ನು ಮನವರಿಕೆ ಮಾಡಿಕೊಟ್ಟರು. ಆದ್ರೆ ಕೆಲ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜಿನ ಹೊರಗಡೆ ಬಂದು ಕುಳಿತ ಹಿನ್ನಲೆಯಲ್ಲಿ ಗೊಂದಲಗಳಾಗುವುದು ಬೇಡ ಎಂದು ಎರಡು ದಿನಗಳ ಕಾಲ ಕಾಲೇಜಿಗೆ ರಜೆ ಸಾರಿದರು.
ಈ ವೇಳೆ ಇನ್ನೊಂದು ವಿದ್ಯಾರ್ಥಿಗಳ ತಂಡ ತರಗತಿ ನಡೆಸುವಂತೆ ಆಗ್ರಹಿಸಿದಾಗ ಸೂಕ್ಷ್ಮತೆ ಮನವರಿಕೆ ಮಾಡಿದ ಪ್ರಾಂಶುಪಾಲರು, ಕಾಲೇಜಿಗೆ ರಜೆ ಸಾರುವಂತೆ ಜಿಲ್ಲಾಧಿಕಾರಿಯವರ ಆದೇಶವಿದ್ದು, ಅದರಂತೆ ರಜೆ ಸಾರಲಾಗುವುದಾಗಿ ತಿಳಿಸಿದರು.