ಮಂಗಳೂರು, ಫೆ. 16 (DaijiworldNews/SM): ನಗರದಲ್ಲಿ ಗಾಂಜಾ ಸಾಗಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಗಾಂಜಾ ಸಹಿತ ಪೊಲೀಸರು ಬಂಧಿಸಿರುವ ಘಟನೆ ಫೆಬ್ರವರಿ 16ರ ಬುಧವಾರದಂದು ನಡೆದಿದೆ.
ಮಂಜೇಶ್ವರ ಮೂಡಂಬೈಲ್ ನಿವಾಸಿ ಪ್ರಫುಲ್ ರಾಜ್ (23), ಬಂಟ್ವಾಳ ಬೊಳಿಯಾರು ನಿವಾಸಿ ಅವಿನಾಶ್(24) ಬಂಧಿತ ಆರೋಪಿಗಳಾಗಿದ್ದಾರೆ. ತಲಪಾಡಿ ಪಡೀಲ್ ರಾಮನಗರ ಎಂಬಲ್ಲಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವಿನಾಶ್ ಕದ್ರಿ ಠಾಣೆಯ ಸರಕಾರಿ ವಾಹನ ಹಾನಿಗೊಳಿಸಿದ ಪ್ರಕರಣದ ಆರೋಪಿ ಕೂಡ ಆಗಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಆರೋಪಿಗಳು ಕೇರಳದಿಂದ ಮಂಗಳೂರಿಗೆ ಗಾಂಜಾ ಸಾಗಾಟಕ್ಕೆ ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಸಹಿತ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಾಜು 5,50,400 ಮೌಲ್ಯದ 2.220 ಕೆ.ಜಿ ಗಾಂಜಾ, 1200ರೂ., ಕೃತ್ಯಕ್ಕೆ ಬಳಸಿದ ಸ್ವಿಪ್ಟ್ ಕಾರು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.