ಮಂಗಳೂರು, ಫೆ. 16 (DaijiworldNews/SM): ಹಿಜಾಬ್ ವಿಚಾರವಾಗಿ ಮಾಧ್ಯಮದ ಮೂಲಕ ನೀಡಿರುವ ಹೇಳಿಕೆ ಬಗ್ಗೆ ನನಗೆ ಕೊಲೆ ಬೆದರಿಕೆಗಳು ಬರುತ್ತಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವುದಾಗಿ ದಕ್ಷಿಣ ಕನ್ನಡ ಯುವ ಜನತಾ ದಳ ಅಧ್ಯಕ್ಷರಾದ ಅಕ್ಷಿತ್ ಸುವರ್ಣ ಹೇಳಿಕೆ ನೀಡಿದ್ದಾರೆ.
ಹಿಜಾಬ್ ಬಗ್ಗೆ ಹೇಳಿಕೆಯನ್ನು ಮಾಧ್ಯಮದ ಮೂಲಕ ನೀಡಿದ್ದೆ. ಆ ಹೇಳಿಕೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನೀಚ ಪದಗಳಿಂದ ನಿಂದಿಸುತ್ತಿದ್ದಾರೆ. ಮಾತ್ರವಲ್ಲದೆ ಕೆಲವರು ಕೊಲೆ ಬೆದರಿಕೆಯನ್ನೂ ಹಾಕುತ್ತಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರಿಗೆ ದೂರನ್ನು ನೀಡಿದ್ದೇನೆ. ಅದರ ಜೊತೆಯಲ್ಲಿ ಬಿಜೆಪಿಯ ಅಂಧ ಭಕ್ತರಿಗೆ ಹೇಳಲಿಚ್ಚಿಸುವುದೇನೆಂದರೆ, ಬಿಜೆಪಿಯ ಅಂಧ ಭಕ್ತರೇ ನಿಮಗೆ ತಾಕತ್ತಿದ್ದರೆ ಎದುರು ಬಂದು ಚರ್ಚಿಸಿ, ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕುವುದು ಸರಿಯಲ್ಲ. ನಿಮ್ಮ ಕೊಲೆ ಬೆದರಿಕೆಗೆಲ್ಲ ನಾನು ಹೆದರುವವನೂ ಅಲ್ಲ ಎಂದು ಅಕ್ಷಿತ್ ಸುವರ್ಣ ಹೇಳಿಕೆಯನ್ನು ನೀಡಿದ್ದಾರೆ.