ಮಂಗಳೂರು, ಫೆ 16 (DaijiworldNews/KP): ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಕೆಲವು ದಿನಗಳಿಂದ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಆಸೀಫ್ ಆಪತ್ಬಾಂಧವ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂಗಳಮುಖಿಯರನ್ನು ಬಂಧಿಸಲಾಗಿದೆ.
ಕಳೆದ ಮಧ್ಯರಾತ್ರಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ವೇಳೆ ಮಂಗಳಮುಖಿಯರ ತಂಡ ಆಗಮಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ದಾಖಲಿಸಿದ್ದರು.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರಿನ ಪೊಲೀಸ್ ಕಮಿಷನರ್ ಶಶಿಕುಮಾರ್. ಸಾಮಾಜಿಕ ಕಾರ್ಯಕರ್ತ ಆಸೀಫ್ ಆಪತ್ಬಾಂಧವ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಆರು ಮಂದಿ ಮಂಗಳಮುಖಿಯರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಅಲ್ಲದೆ ಬಂಧಿತರನ್ನು ಮಂಡ್ಯ ಮೂಲದ ವಾಸವಿ ಗೌಡ (32), ದಾವಣಗೆರೆ ಮೂಲದ ಲಿಪಿಕಾ (19), ಹಾಸನ ಮೂಲದ ಹಿಮಾ (24), ರಾಮನಗರದ ಮೈತ್ರಿ (28) ಹಾಗೂ ಮೈಸೂರಿನ ಆದ್ಯ (22) ಮತ್ತು ಮಾಯಾ (28) ಎಂದು ಗುರುತಿಸಲಾಗಿದ್ದು, ಸದ್ಯ ಇವರೆಲ್ಲ ಪಾಂಡವಪುರದಲ್ಲಿ ನೆಲೆಸಿದ್ದಾರೆ.
ಬಂಧಿತರ ವಿರುದ್ದ ಐಪಿಸಿ ಸೆಕ್ಷನ್ 143,147, 504, 506, 294 ಮತ್ತು 149 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.
ಇನ್ನು ನಾವೆಲ್ಲರೂ ಟೋಲ್ ಗೇಟ್ ಬಳಿ ಹಣ ಬೇಡುತ್ತಿದ್ದಾಗ ಪ್ರತಿಭಟನಕಾರರು ನಮ್ಮನ್ನು ನೋಡಿ ಅಸಭ್ಯವಾಗಿ ವರ್ತಿಸಿ, ಫೋಟೋವನ್ನು ತೆಗೆದುಕೊಂಡಿದ್ದಾರೆ ಅಲ್ಲದೆ ನಮಗೆ ಲೈಂಗಿಕ ಕಿರುಕುಳ ಕೂಡ ನೀಡಿದ್ದಾರೆ ಎಂದು ಮಂಗಳಮುಖಿಯರು ಹೇಳಿದರು.
ಅಲ್ಲದೆ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಲು ಪ್ರತಿಭಟನಕಾರರು ಯಾವುದೇ ಅನುಮತಿ ಪಡೆದಿಲ್ಲ, ಹಾಗಾಗಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಒತ್ತಾಯ ಮಾಡಿದ್ದಾರೆ.