ಕುಂದಾಪುರ, ಫೆ 16 (DaijiworldNews/MS): ಭಗವಂತನಿಗೆ ಅಂತರಂಗದ ಭಕ್ತಿ ಸ್ವೀಕಾರವಾಗುತ್ತದೆ. ಅಂತಃಕರಣ ಶುದ್ಧವಾದ ಭಕ್ತಿಯಿಂದ ಭಗವಂತನಲ್ಲಿ ನಿವೇದನೆ ಮಾಡಿಕೊಂಡರೆ ನೆಮ್ಮದಿ ಲಭಿಸುತ್ತದೆ. ಅಂತಹ ಭಕ್ತಿಯುಳ್ಳ ಜನರು ಇಲ್ಲಿಯವರು. ಧರ್ಮಶ್ರದ್ದೆ ನ್ಯಾಯಕ್ಕೆ ಬೆಲೆ ಕೊಡುವವರು. ಆಧುನಿಕತೆಯಲ್ಲಿ ಬಾಹ್ಯ ವೇಷಭೂಷಣ ಬದಲಾದರೂ ಮನುಷ್ಯತ್ವ ಬದಲಾಗಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕೋಟೇಶ್ವರದ ಮಹಾತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ 67 ವರ್ಷಗಳ ನಂತರ ನಡೆದ ಧ್ವಜಸ್ತಂಭ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಸಂದೇಶ ನೀಡಿದರು.
ನಾಸ್ತಿಕತೆ ದೂರಾಗಿ ಆಸ್ತಿಕತೆ ಮತ್ತೆ ವೃದ್ದಿಯಾಗುತ್ತಿದೆ. ಯುವಕರದಲ್ಲಿ ಧಾರ್ಮಿಕತೆಯ ಪ್ರಜ್ಞೆ ಜಾಗೃತವಾಗುತ್ತಿದೆ. ಧರ್ಮದ ಮಾರ್ಗದರ್ಶನ ಸದಾ ನಮಗೆ ಅಗತ್ಯವಾಗಿರುತ್ತದೆ. ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದರು.
ದೇವಸ್ಥಾನಗಳಲ್ಲಿ ಸಾನಿಧ್ಯವೃದ್ದಿಯಾದರೆ ಭಕ್ತರ ದೋಷ ನಿವಾರಿಸಲು ಸಾಧ್ಯ. ಆ ಹಿನ್ನೆಲೆಯಲ್ಲಿ ಬ್ರಹ್ಮಕಲಶೋತ್ಸವ ಸೇರಿದಂತೆ ಸಾನಿಧ್ಯ ವೃಧ್ದಿಗೆ ನೆಡೆಸುವ ವಿಧಿವಿಧಾನಗಳು ಮಹತ್ವಪೂರ್ಣವಾಗಿವೆ. ದೇವಸ್ಥಾನಗಳು ಪ್ರಾಚೀನತೆಯ ತಳಹದಿಯಲ್ಲಿಯೇ ಇರಬೇಕು ಎಂದರು.
ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಆಶಿರ್ವಚನ ನೀಡಿದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಕೋಟೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣ ಗೊಲ್ಲ, ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಳದ ಪ್ರಧಾನ ತಂತ್ರಿಗಳಾದ ಪ್ರಸನ್ನಕುಮಾರ ಐತಾಳ್, ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಕುಂಭಾಶಿ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ್ಯಸ್ಥರಾದ ದೇವರಾಯ ಶೇರೆಗಾರ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಬೆಟ್ಟಿನ್ ಉಪಸ್ಥಿತರಿದ್ದರು.ವ್ಯವಸ್ಥಾಪನಾ ಸಮಿತಿ ಸದಸ್ಯ ಎನ್.ರಾಘವೇಂದ್ರ ರಾವ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಗೋಪಾಡಿ ಶ್ರೀನಿವಾಸ ರಾವ್ ಪ್ರಸ್ತಾವಿಕ ಮಾತುಗಳನ್ನಾಡಿದರು. ನಟಿ, ನಿರೂಪಕಿ ಅಪರ್ಣಾ ಎನ್ ಕಾರ್ಯಕ್ರಮ ನಿರ್ವಹಿಸಿದರು.