ಕಾರ್ಕಳ, ಫೆ 15 (DaijiworldNews/HR): ಮಾನವನ ದೈಹಿಕ ಆರೋಗ್ಯ ಪರೀಕ್ಷೆಗೆ ತುರ್ತಾಗಿ ಬೇಕಾಗಿರುವ ಸ್ಕ್ಯಾನಿಂಗ್ ಯಂತ್ರವೊಂದನ್ನು ಬೇಡಿಕೆಗೆ ಅನುಗುಣವಾಗಿ ಕಾರ್ಕಳದ ಆಸ್ಪತ್ರೆಯೊಂದಕ್ಕೆ ಕೊಡುಗೆಯಾಗಿ ನೀಡುವುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಘೋಷಿಸಿದರು.
ಬಜಗೋಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಡಾರು-ನಲ್ಲೂರು ಘಟಕ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ರಜತಮಹೋತ್ಸವ ಇದರ ಸಂಯುಕ್ತ ಆಶ್ರಯದಲ್ಲಿ ಜರುಗಿದ್ದ ೨೫ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ, ಸಮಿತಿ ಸದಸ್ಯರು ಸಲ್ಲಿಸಿದ ಮನವಿಗೆ ಡಾ. ವೀರೇಂದ್ರ ಹೆಗ್ಗಡೆ ಸ್ಪಂದಿಸಿ ಸ್ಕ್ಯಾನಿಂಗ್ ಯಂತ್ರವನ್ನು ಕೊಡುಗೆಯ ಭರವಸೆ ನೀಡಿದರು.
ಅಂತರಂಗ ಶುದ್ಧ ಮನಸ್ಸಿನಲ್ಲಿ ವಿನಯತೆಯಿಂದ ದೇವರನ್ನು ಸ್ಮರಿಸಿಕೊಂಡಾಗ ದೇವನು ಒಲಿಯುತ್ತಾನೆ. ದೇವರ ಮೇಲಿನ ನಂಬಿಕೆ ನಿರಂತರವಾಗಿ ಇರಬೇಕು. ಧಾರ್ಮಿಕ ನಂಬಿಕೆಯೂ ಅತ್ಯಾಧುನಿಕವಾದ ಬಾಹ್ಯಕಾಶ ಪ್ರಭಾವಕ್ಕಿಂತಲೂ ಮಿಗಿಲಾಗಿದೆ. ಯಾವುದೇ ಸಂದರ್ಭದಲ್ಲೂ ಯಾವುದೇ ಸ್ಥಳದಲ್ಲಿ ಇದ್ದರೂ ಶೃದ್ಧೆ,ಭಕ್ತಿಯೊಂದಿಗೆ ದೇವರ ನಾಮಸ್ಮರಣೆ ಮಾಡಿದಾಗ ಸತ್ಕಾರ್ಯ ಯಶಸ್ಸು ಆಗಿ ನಡೆಯುತ್ತದೆ. ನಂಬಿಕೆಯ ಮೇಲೆಯೇ ಮಾನವನು ತನ್ನ ಜೀವನದ ರೀತಿ ರಿವಾಜುಗಳನ್ನು ಮುಂದುವರಿಸುತ್ತಾ ಬಂದಿದ್ದಾನೆ ಎಂದರು.
ಸರ್ವರು ಸುಖ,ಶಾಂತಿಯಿಂದ ಬಾಳಿ ಬದುಕುವ ಸದ್ದುದ್ದೇಶವೇ ಸಾಮೂಹಿಕ ಪ್ರಾರ್ಥನೆ, ಪೂಜಾವಿಧಾನವಾಗಿದೆ. ಆ ಮೂಲಕ ಮಾನವರು ಪರಸ್ಪರ ತಮ್ಮನ್ನು ತಾವು ಆರ್ಥೈಸಿಕೊಳ್ಳುತ್ತಾರೆ. ಇಲ್ಲಿ ಜಾತಿ-ಧರ್ಮ-ಭಾಷೆ ಇವುಗಳ ಸಾಮಾರಸ್ಯ ನೆಲೆಗೊಳ್ಳಲು ಪ್ರೇರಣೆಯಾಗುತ್ತದೆ. ಸತ್ಯನಾರಾಯಣ ಪೂಜೆಯು ಮಾನವ ಬದುಕಿಗೆ ದಾರಿದೀಪವಾಗಿದೆ. ಸತ್ಯ,ಧರ್ಮ, ನ್ಯಾಯ,ನೀತಿ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದಿದ್ದಾರೆ.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಮುಡಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಸಂದಭೋಚಿತವಾಗಿ ಮಾತನಾಡಿದರು.
ಮುಡ್ರಾಲು ರಾಮ್ಭಟ್ ಪೌರೋಹಿತ್ಯದಲ್ಲಿ ಪೂಜಾವಿಧಿವಿಧಾನ ನೆರವೇರಿಸಿದರು. ಉದ್ಯಮಿ ಹುರ್ಲಾಡಿ ರಘುವೀರ ಎ. ಶೆಟ್ಟಿ ಅಧ್ಯಕ್ಷತೆವಹಿದರು. ಡಾ. ವೆಂಕಟಗಿರಿ ರಾವ್, ಶ್ರೀ ವಜ್ರನಾಭ ಚೌಟ, ಗಣೇಶ್ ಕಾಮತ್, ಸದಾಶಿವ ಸಾಲಿಯಾನ್, ಹರೀಶ್ ಸಾಲ್ಯಾನ್, ಕವಿತಾ ಸಂತೋಷ್, ಪ್ರಸಾದ್ ಸಿ. ಆಚಾರ್ಯ, ಪ್ರವೀಣ್ ಹೆಗ್ಡೆ, ಉಪಸ್ಥಿತರಿದ್ದರು.
ರಮಾನಂದ ಪೂಜಾರಿ, ವಸಂತ ಶೆಟ್ಟಿ, ದೇವಿದಾಸ್ ಪ್ರಭು, ಶರತ್ ಶೆಟ್ಟಿ, ಸದಾನಂದ ಸ್ಲಯಾನ್, ಹರಿಶ್ಚಂದ್ರ ತೆಂಡುಲ್ಕರ್, ಶೈಲೇಶ್ವರ್ಮ, ಹಿತೇಶ್ ಶೆಟ್ಟಿ, ರಾಬರ್ಟ್ ಸಂಜೀವ ಮೊಯಿಲಿ, ಶ್ಯಾಮ ಎನ್ ಶೆಟ್ಟಿ, ಪುಷ್ಪಾ, ಸುರೇಶ್ ಕಾಮತ್, ವಿಠಲ ಆಚಾರ್ಯ,ಶಂಕರ ಪೂಜಾರಿ, ಸುಚಿತ್ರಾ, ಉಮೇಶ್ ಸಾಲಿಯಾನ್, ವನಿತಾ, ದಿವಾಕರ, ಜಯಲಕ್ಷ್ಮೀ ಹೆಗ್ಡೆ, ರಾಜೇಂದ್ರ ಜೈನ್ ಸಹಕರಿಸಿದರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ರಜತಮಹೋತ್ಸವ ಸಮಿತಿಯ ಅಧ್ಯಕ್ಷ ಮಹಾವೀರ ಜೈನ್ ಸ್ವಾಗತಿಸಿದರು. ಧರ್ಮಸ್ಥಳ ಶ್ರೀ ಕ್ಷೇತ್ರದ ಯೋಜನಾಧಿಕಾರಿ ಭಾಸ್ಕರ್ ಧನ್ಯವಾದವಿತ್ತರು. ನಲ್ಲೂರು ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ನಾಗೇಶ್ ನಿರೂಪಿಸಿದರು.