ಕುಂದಾಪುರ, ಫೆ 15 (DaijiworldNews/MS): ವರಾಹಿ ನೀರಾವರಿ ಯೋಜನೆಯಲ್ಲಿ ವ್ಯತ್ಯಾಸವಾದರೆ ಅದು ನಿರಂತರ ಸಂಘರ್ಷಕ್ಕೆ ದಾರಿಯಾಗುತ್ತದೆ. ವರಾಹಿ ನೀರು ಕಾರ್ಕಳ, ಕಾಪುವಿಗೆ ಹೋಗುತ್ತದೆ. ಆದರೆ ವರಾಹಿ ನದಿ ಹರಿಯುವ ಪ್ರದೇಶಕ್ಕೆ ನೀರು ಸಿಗುವುದಿಲ್ಲವೆಂದಾದರೆ ರೈತರು ತಮ್ಮ ಸಹನೆಯನ್ನು ಕಳೆದುಕೊಳ್ಳುವಂತೆ ಮಾಡಲಿದೆ. ಈ ವಿಚಾರದಲ್ಲಿ ವರಾಹಿ ಅಧಿಕಾರಿಗಳು ರಾಜಕೀಯ ಹಾಗೂ ಗುತ್ತಿಗೆದಾರರ ಒತ್ತಡಕ್ಕೆ ಒಳಗಾಗದೆ ರೈತರ ಭೂಮಿಗೆ ನೀರು ಸಿಗುವಂತೆ ಮಾಡಬೇಕು ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಅವರು ಸಿದ್ಧಾಪುರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಸಿದ್ಧಾಪುರ ವಲಯದ ವತಿಯಿಂದ ನೆಡೆದ ಸಿದ್ದಾಪುರ ವ್ಯಾಪ್ತಿಯ ವರಾಹಿ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವರಾಹಿ ನೀರಾವರಿ ಯೋಜನೆ ಸಿದ್ಧಾಪುರದಲ್ಲಿಯೇ ಇದೆ. ಆದರೂ ಸಿದ್ಧಾಪುರಕ್ಕೆ ಇನ್ನೂ ನೀರು ಸಿಕ್ಕಲ್ಲ ಎನ್ನುವುದು ವಿಪರ್ಯಾಸ. ಬಲದಂಡೆ ಯೋಜನೆ ಇನ್ನೂ ಕೂಡಾ ಒಂದು ಹಂತಕ್ಕೆ ಬಂದಿಲ್ಲ. ಮೂಲ ಯೋಜನೆಯಲ್ಲಿ ಇಲ್ಲದವುಗಳು ಈಗ ವೇಗ ಪಡೆದುಕೊಂಡಿದೆ. ಸಿದ್ಧಾಪುರ ಏತ ನೀರಾವರಿ ಯೋಜನೆ ಇನ್ನೂ ಆರ್ಥಿಕ ಮಂಜೂರಾತಿ ಆಗಿಲ್ಲ. ಪ್ರಸ್ತಾವನೆ ಸರ್ಕಾರದ ಮುಂದಿದೆಯಾದರೂ ಅನುಮೋದನೆ ನೀಡುವುದಕ್ಕೆ ಈ ಭಾಗ ಚುನಾಯಿತ ಪ್ರತಿನಿಧಿಗಳ ಇಚ್ಚಾಶಕ್ತಿ ಅಗತ್ಯ. ರೈತರು ಈ ಭಾಗದ ಚುನಾಯಿತ ಪ್ರತಿನಿಧಿಗಳ ಮೂಲಕ ಒತ್ತಡ ತರುವ ಕೆಲಸ ಆಗಬೇಕಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ 10 ನದಿಗಳು ಹರಿಯುತ್ತಿದ್ದರೂ ಕೂಡಾ ಎಲ್ಲರ ದೃಷ್ಟಿ ವರಾಹಿ ಮೇಲೆಯೇ ಇದೆ. ಹತ್ತಿರದಿಂದಲೇ ಕುಡಿಯುವ ನೀರು ಒದಗಿಸುವ ಎಲ್ಲ ಅವಕಾಶಗಳು ಇದ್ದರೂ ಕೂಡಾ ದೂರದ ವರಾಹಿಯನ್ನೇ ಎಲ್ಲರೂ ನೆಚ್ಚಿಕೊಳ್ಳುವುದರ ಹಿನ್ನೆಲೆ ಅರ್ಥವಾಗುತ್ತಿಲ್ಲ. ಕುಡಿಯುವ ನೀರು ನೀಡುವಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ ವರಾಹಿ ಯೋಜನೆಯ ಮೂಲ ಯೋಜನೆಯಂತೆ ಇಲ್ಲಿನ ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದರು.
ರಟ್ಟಾಡಿ ಭಾಗವನ್ನು ಹೊರಗಿಟ್ಟಿರುವುದು ಸರಿಯಲ್ಲ. ಕುಳಂಜೆ ಮೂಲಕ ನೀರು ಹೋಗುವುದರಿಂದ ಹತ್ತಿರದ ರಟ್ಟಾಡಿಗೂ ಅಗತ್ಯವಾಗಿ ನೀರು ನೀಡಲೇ ಬೇಕಾಗುತ್ತದೆ. ಅಂತೆಯೇ ಸಿದ್ದಾಪುರ, ಹೊಸಂಗಡಿ, ಉಳ್ಳೂರು, ಮಚ್ಚಟ್ಟು, ಶಂಕರನಾರಾಯಣ ಗ್ರಾಮಗಳಿಗೂ ವರಾಹಿ ನೀರು ಸಿಗಲೇಬೇಕು. ಇದು ಸಿಗದೇ ಇದ್ದರ ರೈತರು ತಾಳ್ಮೆ ಕಳೆದುಕೊಳ್ಳುವ ಸಂಭವವಿದೆ ಎಂದರು.
ಸಭೆಯನ್ನು ಉದ್ದೇಶಿಸಿ ಸಂಪಿಗೇಡಿ ಸಂಜೀವ ಶೆಟ್ಟಿ ಮಾತನಾಡಿ, ಈ ಹಿಂದೆ ನಡೆದ ರೈಥ ಸಂಘದ ಸಭೆಗಳಲ್ಲಿ ಅಧಿಕಾರಿಗಳು ಅಚ್ಚುಕಟ್ಟು ಪ್ರದೇಶ ಸರ್ವೇ ಸಂಖ್ಯೆಯನ್ನು ನೀಡುತ್ತಿದ್ದರು. ಸಿದ್ದಾಪುರ ಭಾಗದ ಅಚ್ಚುಕಟ್ಟು ಪ್ರದೇಶದ ಸರ್ವೇ ನಂಬ್ರನ್ನು ಕೂಡಲೇ ನೀಡಬೇಕು. ಸಿದ್ದಾಪುರ ಏತ ನೀರಾವರಿ ಯೋಜನೆ ಇವತ್ತು ನೆನೆಗುದಿಗೆ ಬಿದ್ದಿದೆ. ಸೌಕೂರು ಏತ ನೀರಾವರಿ ಕಾಮಗಾರಿ ಆರಂಭಗೊಂಡು ಮೂಲ ದಿಕ್ಕಿನಲ್ಲಿ ಸಾಗದೇ ಹೇಗೇಗೋ ಸಾಗುತ್ತಿದೆ. ನಿಜವಾದ ರೈತರಿಗೆ ಅನ್ಯಾಯವಾಗುತ್ತಿದ್ದರೂ ಯಾರೂ ಮಾತನಾಡದ ಸ್ಥಿತಿಯಲ್ಲಿದ್ದಾರೆ. ಈಗ ಸಿದ್ದಾಪುರದಲ್ಲಿರುವ ವಾರಾಹಿ ಕಛೇರಿಗಳಿರುವ ಪ್ರದೇಶಕ್ಕೆ ಕುಡಿಯುವ ನೀರು ತಗೆದುಕೊಂಡು ಹೋಗಲು ಮೊದಲು ಸಿದ್ಧಾಪುರ ಪೇಟೆಯಲ್ಲಿ ಮಾರ್ಗ ನೋಡಿದ್ದರೂ ನಂತರ ಬದಲಾಯಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ. ಸಿದ್ದಾಪುರಕ್ಕೆ ನೀರು ಕೊಡಲು ಇಲ್ಲೊಂದು ಅವಕಾಶವಿತ್ತು ಎಂದರು.
ರೈತರ ಸಭೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದ ಅಧಿಕಾರಿಗಳ ನಡೆಯನ್ನು ರೈತರು ತೀವ್ರವಾಗಿ ಖಂಡಿಸಿದರು. ಅಚ್ಚುಕಟ್ಟು ಪ್ರದೇಶದ ಸರ್ವೇನಂಬ್ರಗಳನ್ನು ಅಧಿಕಾರಿಗಳು ತಿಳಿಸಿದ ಗಡುವಿನ ಒಳಗೆ ನೀಡದೇ ಇದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಶೇಖರ ಕುಲಾಲ, ಉಪಾಧ್ಯಕ್ಷರು, ಸದಸ್ಯರು, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ, ರೈತ ಸಂಘದ ಪ್ರಮುಖರು ಉಪಸ್ಥಿತರಿದ್ದರು. ರೈತ ಸಂಘದ ವಕ್ತಾರ ವಿಕಾಸ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಿದ್ದಾಪುರ ವಲಯ ಅಧ್ಯಕ್ಷ ಸದಾಶಿವ ಶೆಟ್ಟಿ ವಂದಿಸಿದರು. ಸಿದ್ದಾಪುರ ವಲಯ ರೈತ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.