ಮಂಗಳೂರು, ಫೆ 14 (DaijiworldNews/KP): ನಾನೇನೋ ಉಳ್ಳಾಲದ ಮುಲ್ಲಾ ಅಲ್ಲ, ಆದರೆ ಹತ್ತಾರು ಮುಲ್ಲಾಗಳು, ಮೌಲ್ವಿಗಳು ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಯು ಟಿ ಖಾದರ್ ವಾಗ್ದಾಳಿ ನಡೆಸಿದರು.
ಉಳ್ಳಾಲದ ಮುಲ್ಲಾ ಖಾದರ್ಗೆ ಮೈಸೂರು ಇತಿಹಾಸದ ಬಗ್ಗೆ ಏನು ಗೊತ್ತಿಲ್ಲ ಎಂಬ ಪ್ರತಾಪ್ ಹೇಳಿಕೆಗೆ ಉತ್ತರಿಸಿದ ಅವರು, ನಾನೇನೋ ಉಳ್ಳಾಲದ ಮುಲ್ಲಾ ಅಲ್ಲ, ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ನೂರಾರು ಮುಲ್ಲಾಗಳು, ಮೌಲ್ವಿಗಳು ಗಾಂಧೀಜಿಗೆ ಹೆಗಲಾಗಿದ್ದರು ಹಾಗೂ ಸ್ವಾತಂತ್ರ್ಯಕ್ಕಾಗಿ ಹತ್ತಾರು ಮುಲ್ಲಾಗಳು ಪ್ರಾಣತ್ಯಾಗ ಮಾಡಿದ್ದಾರೆ ಎಂದು ಪತ್ರದ ಮೂಲಕ ಪ್ರತಾಪ್ ಅವರಿಗೆ ತಿರುಗೇಟು ನೀಡಿದರು.
ಬುದ್ದಿವಂತ ಸಂಸದರಾಗಿರುವ ಪ್ರತಾಪ್ ಅವರು ಸಾವರ್ಕರ್ ಅವರನ್ನು ಒಪ್ಪುತ್ತಾರೋ ಇಲ್ಲವೋ ಅದನ್ನು ಹೇಳಲಿ. ಈಗೇನಾದರೂ ಸಾವರ್ಕರ್ ಬದುಕ್ಕಿದ್ದರೆ ಮೈಸೂರು ರೈಲುಗೆ ಟಿಪ್ಪು ಎಕ್ಸ್ಪ್ರೆಸ್ ಎಂದು ಹೆಸರು ಇರಬೇಕು ಎಂಬುದನ್ನು ನನ್ನಂತೆ ಅವರೂ ಪ್ರತಿಪಾದಿಸುತ್ತಿದ್ದರು ಎಂದು ಹೇಳಿದರು.
ದೇಶಕ್ಕೆ ಬ್ರಿಟಿಷರಿಂದ ಅಪಾಯ ಇದೆ ಎಂಬುದನ್ನು ಮೊದಲು ಅರಿತವರೇ ಹೈದರಾಲಿ ಮತ್ತು ಟಿಪ್ಪು ಎಂದು ಸಾವರ್ಕರ್ ಹೇಳಿದ್ದರು ಹಾಗೂ ಪುಸ್ತಕದಲ್ಲಿ ಸಾವರ್ಕರ್ ಮುಲ್ಲಾಗಳ ಬಗ್ಗೆಯೂ ಬರೆದಿದ್ದಾರೆ ಎಂದು ಹೇಳಿದರು.