ಮಂಗಳೂರು, ಫೆ 14 (DaijiworldNews/KP): ಕೂಳೂರಿನ ಪಂಜಿನಮೊಗರಿನಲ್ಲಿರುವ ಸೈಂಟ್ ಆಂಟನಿ ಚರ್ಚ್ಗೆ ಸೇರಿದ್ದ ಪ್ರಾರ್ಥನಾ ಕೇಂದ್ರ ಕಟ್ಟಡವನ್ನು ನೆಲಸಮಗೊಳಿಸಿರುವ ಆರೋಪಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯ ಕ್ರಿಶ್ಚಿಯನ್ ನಿವಾಸಿಗಳು, ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾರ್ಪೋರೇಟರ್ಗಳು ನಿನ್ನೆ ಸಂಜೆ ಕಾವೂರು ಪೊಲೀಸ್ ಸ್ಟೇಷನ್ ಬಳಿ ಪ್ರತಿಭಟನೆ ನಡೆಸಿದ್ದಾರೆ.
2005ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿಗೆಂದು ಮಂಜೂರು ಮಾಡಲಾಗಿತ್ತು, ಆದರೆ ಇಲ್ಲಿ ಚರ್ಚ್ ನಿರ್ಮಿಸಲಾಗಿತ್ತು ಎಂಬ ಆರೋಪವು ಕೇಳಿಬಂದ ಹಿನ್ನಲೆಯಲ್ಲಿ ಕಟ್ಟವನ್ನು ತೆರವು ಗೊಳಿಸುವಂತೆ ಆದೇಶಿಸಲಾಗಿತ್ತು. ಆದರೆ ಫೆಬ್ರವರಿ 5 ಸ್ಥಳಿಯ ಸಮಿತಿಯೊಂದು ಪ್ರಾರ್ಥನಾ ಕೇಂದ್ರವನ್ನು ನೆಲಸಮಗೊಳಿಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.
ಸೈಂಟ್ ಆಂಟನಿ ಚರ್ಚ್ಗೆ ಸೇರಿದ್ದ ಪ್ರಾರ್ಥನಾ ಕೇಂದ್ರ ಕಟ್ಟಡವನ್ನು ಆಕ್ರಮವಾಗಿ ನೆಲಸಮಗೊಳಿಸಿರುವ ಆರೋಪಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕಾವೂರು ಪೊಲೀಸ್ ಸ್ಟೇಷನ್ ಬಳಿ ಮಾಜಿ ಶಾಸಕ ಮೊಯ್ದಿನ್ ಬಾವಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಕಾನ್, ಕಾರ್ಪೋರೆಟರ್ ಅನಿಲ್ ಕುಮಾರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಡಿಸಿಪಿ ಹರಿರಾಮ್ ಶಂಕರ್ ಸ್ಥಳಕಾಗಮಿಸಿ ಪ್ರತಿಭಟನಕಾರರ ಜೊತೆ ಮಾತನಾಡಿ ಆರೋಪಿಗಳ ಪತ್ತೆಗಾಗಿ ಕಾರ್ಯಚರಣೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.