ಉಡುಪಿ, ಫೆ 15 (DaijiworldNews/MS): ಹಿಜಾಬ್ ಪರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಹಿಂದಿರುವ ರಾಜಕೀಯ ನಿಲುವು ಬಹಿರಂಗಗೊಂಡಿದೆ. ಇನ್ನೂ ಮತದಾನದ ಹಕ್ಕು ಪಡೆಯದ ಹಿಜಾಬ್ ಹೋರಾಟಗಾರರಿಗೆ ಚುನಾವಣೆಯ ಚಿಂತೆ ಏಕೆ ಎಂದು ಶಾಸಕ ರಘುಪತಿ ಭಟ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಹಿಜಾಬ್ ಹೋರಾಟ ಒಂದು ಅಂತಾರಾಷ್ಟ್ರೀಯ ಸಂಚು. ಭಾರತದ ಘನತೆ ಹಾಳು ಮಾಡುವ ಉದ್ದೇಶದಿಂದಲೇ ಈ ಹೋರಾಟ ಆರಂಭಿಸಿದ್ದಾರೆ.ಇವರ ಎಲ್ಲಾ ಕುತಂತ್ರಗಳು ಈಗ ಬಯಲಾಗುತ್ತಿದೆ. ಇದೆಲ್ಲವನ್ನೂ ರಾಷ್ಟೀಯ ತನಿಖಾ ಸಂಸ್ಥೆಯ ಮೂಲಕ ತನಿಖೆ ಮಾಡಬೇಕು ಎಂದು ನಾನು ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ. ಹಿಜಾಬ್ ಪರವಾಗಿ ನ್ಯಾಯಾಲಯದ ಮೊರೆ ಹೋಗಿದ್ದ ವಿದ್ಯಾರ್ಥಿನಿಯರ ಹಿಂದಿರುವ ರಾಜಕೀಯ ನಿಲುವು ಬಹಿರಂಗವಾಗಿದೆ.ಈ ವಿದ್ಯಾರ್ಥಿನಿಯರ ಪರವಾಗಿ ಹೈಕೋರ್ಟ್ನಲ್ಲಿ "ಉತ್ತರ ಪ್ರದೇಶದ ಚುನಾವಣೆ ಮುಗಿಯುವವರೆಗೆ ಹಿಜಾಬ್ ಪ್ರಕರಣದ ಹೈಕೋರ್ಟ್ ವಿಚಾರಣೆ ಮುಂದೂಡಬೇಕು" ಎಂಬ ಅರ್ಜಿ ಹಾಕಲಾಗಿದೆ. ಹಿಜಾಬ್ ಹೋರಾಟಗಾರರಿಗೆ ಚುನಾವಣೆಯ ಚಿಂತೆಯೇಕೆ? ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಮತದಾನದ ಹಕ್ಕು ಪಡೆಯದ ವಿದ್ಯಾರ್ಥಿನಿಯರು ದೂರದ ಉತ್ತರ ಪ್ರದೇಶದ ಚುನಾವಣೆಯ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆಂದರೆ ಇವರ ಹಿಂದಿರುವ ಕಾಣದ 'ಕೈ'ಗಳು ಯಾವುವು?ಹಿಜಾಬ್ ಬೇಕೆಂದವರು ಈಗ ಹಿಜಾಬ್ ವಿಚಾರಣೆಯನ್ನೇ ಮುಂದೂಡಿ ಎಂದು ಅರ್ಜಿ ಹಾಕಿರುವುದೇಕೆ?ಉಡುಪಿಗೂ, ಉತ್ತರ ಪ್ರದೇಶದ ಚುನಾವಣೆಗೂ ಏನು ಸಂಬಂಧ?ಮಧ್ಯಂತರ ಆದೇಶದಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದಿದ್ದ ವಿದ್ಯಾರ್ಥಿನಿಯರು ಮಧ್ಯಂತರ ಆದೇಶದ ಬಳಿಕ ಉತ್ತರ ಪ್ರದೇಶದ ಚುನಾವಣೆಯ ಕಾರಣ ನೀಡಿ ವಿಚಾರಣೆಯನ್ನೇ ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದಾರೆ.ವಿದ್ಯಾರ್ಥಿನಿಯರನ್ನು ಬಳಸಿಕೊಂಡು ರಾಜಕೀಯ ಆಟ ಆಡುತ್ತಿರುವವರನ್ನು ಜನರು ಎಂದಿಗೂ ಕ್ಷಮಿಸಲಾರರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.