ಕಾರ್ಕಳ, ಫೆ.14 (DaijiworldNews/HR): ಪರಿಸರಕ್ಕೆ ಮಾರಕವಾಗಿದೆ ಎಂದು ಆರೋಪಿಸಿ ಸಾಣೂರು ಗ್ರಾಮದ ಮುರತಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದರ್ಶ್ ಇಂಡಸ್ಟ್ರಿಯಲ್ ಕೆಮಿಕಲ್ ಫ್ಯಾಕ್ಟರಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು.
ಕಾರ್ಕಳ ಪರಿಸರ ರಕ್ಷಣಾ ಸಮಿತಿ (ರಿ) ಹಾಗೂ ಸಾಣೂರಿನ ಗ್ರಾಮಸ್ಥರು ಪ್ರತಿಭಟನೆಯ ನೇತೃತ್ವದವನ್ನು ವಹಿಸಿದ್ದು, ಪಂಚಾಯತ್ ಬಳಿಯಿಂದ ಹೊರಟ ಮೆರವಣಿಗೆಯಲ್ಲಿ ಅಸಂಖ್ಯಾತ ಗ್ರಾಮಸ್ಥರು ಪಾಲ್ಗೊಂಡು ಆದರ್ಶ್ ಫ್ಯಾಕ್ಟರಿ ವಿರುದ್ದ ಘೋಷಣೆ ಕೂಗುತ್ತಾ ಮುರತ್ತಂಗಡಿಗೆ ಸಾಗಿ ಬಂದು ಪ್ರತಿಭಟನಾ ಸ್ಥಳದಲ್ಲಿ ತಹಶೀಲ್ದಾರ್ ಅಗಮಿಸುವವರೆಗೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ತಹಸೀಲ್ದಾರ್ ಪುರಂದರ.ಕೆ ಸ್ಥಳಕ್ಕೆ ಬಂದು ಮನವಿಯನ್ನು ಸ್ವೀಕರಿಸಿ ಮಾತನಾಡಿ, ಗ್ರಾಮಸ್ಥರು ಕೋರಿಕೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಾರ್ವಜನಿಕರ ಮನವಿಗೆ ಸ್ಪಂದಿಸುವ ಭರವಸೆ ನೀಡಿದರು.
ಕಳೆದ ಎರಡು ವರ್ಷಗಳ ಹಿಂದೆ ಉಡುಪಿ ಜಿಲ್ಲಾಡಳಿತವು ಆದರ್ಶ ಕೆಮಿಕಲ್ ಫ್ಯಾಕ್ಟರಿ ವಿಸ್ತರಿಸುವ ಪೂರ್ವದಲ್ಲಿ ಸಾಣೂರಿನಲ್ಲಿ ಜನಸಂಪರ್ಕ ಸಭೆಯನ್ನು ಆಯೋಜಿಸಿತು. ಆ ಸಭೆಗೆ ಮಾಧ್ಯಮದವರಿಗೆ ಅವಕಾಶ ನೀಡಿರಲಿಲ್ಲ. ಪರಿಸರಕ್ಕೆ ಮಾರಕವಾಗಿರುವ ಯಾವುದೇ ತರದ ಕೆಮಿಕಲ್ ಪ್ಯಾಕ್ಟರಿಯನ್ನು ಸಾಣೂರಿನಲ್ಲಿ ಆರಂಭಿಸದಂತೆ ಗ್ರಾಮಸ್ಥರು ಸಭೆಯಲ್ಲಿ ಒತ್ತಾಯಿಸಿದ್ದರು. ಈ ನಡುವೆ ಅದೇ ಗ್ರಾಮದಲ್ಲಿ ಅದರ್ಶ ಇಂಡಸ್ಟ್ರಿಯಲ್ ಕೆಮಿಕಲ್ ಫ್ಯಾಕ್ಟರಿ ಆರಂಭಗೊಂಡಿರುವ ಕುರಿತು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯ ಕರುಣಾಕರ ಎಸ್ ಕೋಟ್ಯಾನ್, ಕೆಎಂಸಿ ನಿರ್ದೇಶಕ ಸಾಣೂರು ನರಸಿಂಹ ಕಾಮತ್, ಸಾಮಾಜಿಕ ಹೋರಾಟಗಾರ ರಾಮ್ ಪ್ರಕಾಶ್ ಶೆಟ್ಟಿ, ಪ್ರಕಾಶ್ ರಾವ್, ರಘುರಾಮ್ ಶೆಟ್ಟಿ, ಶಾಂತರಾಮ್ ಶೆಟ್ಟಿ ನೇತೃತ್ವ ವಹಿಸಿದರು. ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಉದಯ ಎಸ್ ಕೋಟ್ಯಾನ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ಪೂಜಾರಿ, ಸದ್ಯರುಗಳಾದ ಯುವರಾಜ್ ಜೈನ್, ಸರಸ್ವತಿ, ಪ್ರಮೀಳಾ, ಸುನಂದಾ, ತಾ. ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಕೋಟ್ಯಾನ್, ಎಪಿಎಂಸಿ ನಾಮ ನಿರ್ದೇಸಿತ ಸದಸ್ಯರು ದೇವಾನಂದ್ ಶೆಟ್ಟಿ, ಸಾಣೂರು ಯುವಕ ಮಂಡಲ ಸದಸ್ಯರು, ಮುರತಂಗಡಿ ಬಾಲಾಂಜನೇಯ ಸಂಘದ ಸದಸ್ಯರು, ಶ್ರೀ ಕ್ಷೇ. ದ. ಗ್ರಾಮಭಿವೃದ್ಧಿ ಸಂಘದ ಸದಸ್ಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡರು.