ಬಂಟ್ವಾಳ, ಫೆ.14 (DaijiworldNews/HR): ಕಾನೂನಿನ ಬಗ್ಗೆ ಅರಿವು ಇಲ್ಲದಿರುವುದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತಿದೆ, ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಬಂಟ್ವಾಳ ಜೆಎಂಎಫ್ಸಿಯ ಹಿರಿಯ ಸಿವಿಲ್ ನ್ಯಾಯಾಧೀಶ ಬಾಲಗೋಪಾಲಕೃಷ್ಣ ಹೇಳಿದ್ದಾರೆ.
ಮಂಗಳೂರಿನ ಶೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಕಂಪೆನಿ ಅಮಿಟೆಡ್ ನ ಬಂಟ್ವಾಳ ಹಾಗೂ ಪುತ್ತೂರು ಶಾಖೆಯ ವತಿಯಿಂದ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಮತ್ತು ಕಾನೂನು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಲಿಕೆಯತ್ತ ಹೆಚ್ಚು ಆಸಕ್ತಿವಹಿಸುವಂತೆ ತಿಳಿಸಿ, ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದರ ಜೊತೆಗೆ ಸಮಾಜದ ಆಸ್ತಿಯಾಗಿ ಜೀವನ ನಡೆಸುವಂತೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಕೀಲ ಅಬ್ದುಲ್ ಜಲೀಲ್ ಮಾತನಾಡಿ ಕಾನೂನಿನ ಅರಿವು ಜೀವನದ ಅವಿಭಾಜ್ಯ ಅಂಗ ಎಂದರು.
ಬಂಟ್ವಾಳ ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ರಮ್ಯಾ ಹೆಚ್. ಆರ್., ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ಗಣೇಶಾನಂದ ಎನ್. ಸೋಮಯಾಜಿ, ಸರಕಾರಿ ಅಭಿಯೋಜಕಿ ಸರಸ್ವತಿ, ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು. ದಾಮೋದರ ಪಾಟಾಳಿ, ಸರಪಾಡಿ ಅಶೋಕ್ ಶೆಟ್ಟಿ, ಮೋಹನ್ ನಾಯ್ಕ್, ಸಜಿಪಮೂಡ ಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮೀ, ಶ್ರೀರಾಮ್ ಟ್ರಾನ್ಸ್ ಫೋರ್ಸ್ ಫೈನಾನ್ಸ್ ನ ಉಲ್ಲಾಸ್ ನಾಯಕ್, ಪುನೀತ್ ಕುಮಾರ್, ಜಯಪ್ರಕಾಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀರಾಮ್ ಟ್ರಾನ್ಸ್ ಫೋರ್ಸ್ ಫೈನಾನ್ಸ್ ನ ನಾಗರಾಜ್ ಬಿ. ಸ್ವಾಗತಿಸಿ, ಚೇತನ್ ಅರಸ್ ವಂದಿಸಿದರು. ಪ್ರಶಾಂತ್ ಕರ್ಗಲ್ ಕಾರ್ಯಕ್ರಮ ನಿರ್ವಹಿಸಿದರು.