ಕುಂದಾಪುರ, ಫೆ 14 (DaijiworldNews/MS): "ಕುಂದಾಪುರದ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಲು ಹಿಂದು ಜಾಗರಣ ವೇದಿಕೆ ಪ್ರಚೋದಿಸಿಲ್ಲ. ಇದು ಕೇವಲ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ. ಹಿಜಾಬ್ ವಿವಾದದ ಹಿಂದೆ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ತೀವ್ರ ತನಿಖೆಗೊಳಪಡಿಸಲಿ" ಎಂದು ಹಿಂದು ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೆ ಟಿ ಒತ್ತಾಯಿಸಿದ್ದಾರೆ.
ಅವರು ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ , 'ಉಡುಪಿಯಿಂದ ಪ್ರಾರಂಭವಾದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವುದರ ಹಿಂದೆ ಪಿಎಫ್ ಐ ಮತ್ತು ಇಸ್ಲಾಮಿಕ್ ಸಂಘಟನೆಗಳ ಪ್ರಾಯೋಜಿತ ಸಂಚು ಅಡಗಿದೆ.ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಡಿಸೆಂಬರ್ ತನಕ ನೆನಪಾಗದ ಧಾರ್ಮಿಕ ಹಕ್ಕು ಏಕಾಏಕಿ ಗಲಭೆ ಗೆ ತಿರುಗಿದ್ದರ ಹಿಂದೆ ಸಿಎಪ್ ಐ ಮತ್ತು ಪಿಎಫ್ ಐ ಇದೆ. ಹಿಜಾಬ್ ಗಾಗಿ ಗದ್ದಲ ಎಬ್ಬಿಸಿರುವ ಹೆಣ್ಣುಮಕ್ಕಳು ಮುಗ್ಧರಲ್ಲ, ಎಂದು ಆರೋಪಿಸಿದರು.
ಅವರು ಪಿಎಫ್ ಐ ವಿದ್ಯಾರ್ಥಿ ಸಂಘಟನೆಯಾದ ಸಿಎಪ್ಐ ನ ಸಂಪರ್ಕದಲ್ಲಿದ್ದಾರೆ ಎನ್ನುವುದಕ್ಕೆ ಆ ಹೆಣ್ಣುಮಕ್ಕಳ ಟ್ವಿಟರ್ ಅಕೌಂಟ್ ಸಾಕ್ಷಿ ಒದಗಿಸುತ್ತದೆ. ಹಿಜಾಬ್ ವಿವಾದ ಎಬ್ಬಿಸುವಲ್ಲಿ CFI ಪಾತ್ರ ಎಷ್ಟಿದೆ ಎನ್ನುವುದು ವಿಜಯ್ ಪಟೇಲ್ ಎನ್ನುವವರು ತಮ್ಮ ಟ್ವಿಟರ್ ತ್ರೆಡ್ ನಲ್ಲಿ ಬಯಲುಗೊಳಿಸಿದ್ದಾರೆ.
ಆ ತ್ರೆಡ್ ಇಟ್ಟುಕೊಂಡು ಆ ವಿದ್ಯಾರ್ಥಿನಿಯರನ್ನ ತನಿಖೆಗೆ ಒಳಪಡಿಸಿದರೆ ಹಿಜಾಬ್ ಕುತಂತ್ರದ ಹಿಂದಿರುವ ಎಲ್ಲಾ ಸಂಚುಗಳು ಬಯಲಾಗುತ್ತದೆ. ಮಾತ್ರವಲ್ಲದೆ ಕುಂದಾಪುರದಲ್ಲಿ ಹಿಜಾಬ್ ಗದ್ದಲ ನಡೆಯುವಾಗ ರೌಡಿ ಶೀಟರ್ ಪಿ ಎಫ್ ಐ ಕಾರ್ಯಕರ್ತರು ಡ್ರ್ಯಾಗರ್ ಸಮೇತ ಸಿಕ್ಕಿಬಿದ್ದಿರುವುದು ಕೋಮುಗಲಭೆ ಎಬ್ಬಿಸುವ ಸಂಚಿರುವುದು ಎದ್ದು ಕಾಣಿಸುತ್ತದೆ.
ಅದೇ ರೀತಿ ಪಿ ಎಫ್ ಐ ತೆಲಂಗಾಣದ ಭಾಗವಾದ ಹೆಚ್ ವೈಸಿ ಸಂಘಟನೆಯ ಪ್ರಮುಖ ಕುಂದಾಪುರಕ್ಕೆ ಬಂದು ಅಲ್ಲಿನ ಹಿಜಾಬ್ ಹೆಣ್ಣುಮಕ್ಕಳಿಗೆ ಬೆಂಬಲಿಸುವುದು, ಕೊಲ್ಲಿ ರಾಷ್ಟ್ರಗಳಲ್ಲಿ ಈ ವಿಷಯವಾಗಿ ಚರ್ಚೆಗಳು ನಡೆಯುತ್ತಿರುವುದು ಎಲ್ಲವೂ ಪಿಎಫ್ ಐ ನಡೆಸುತ್ತಿರುವ ಷಡ್ಯಂತ್ರ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.
ಹಾಗಾಗಿ ಇಲಾಖೆ ತಕ್ಷಣ ವಿಸ್ತ್ರತ ತನಿಖೆ ಕೈಗೊಳ್ಳಬೇಕು ಎಂದು ಕರ್ನಾಟಕ ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ.