ಉಡುಪಿ, ಫೆ 14 (DaijiworldNews/KP): ಹಿಜಾಬ್-ಕೇಸರಿ ಶಾಲು ವಿವಾದದಿಂದ ಐದು ದಿನಗಳಿಂದ ಬಂದ್ ಆಗಿದ್ದ ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಪ್ರೌಢ ಶಾಲಾ ವಿಭಾಗವು ಇಂದಿನಿಂದ ಮತ್ತೆ ಆರಂಭವಾಗಿದೆ.
ಸದ್ಯ ಈಗ ಎಲ್ಲ ವಿದ್ಯಾರ್ಥಿಗಳು ಎಂದಿನಂತೆ ಶಾಲೆಗಳಿಗೆ ಬಂದು ಪರೀಕ್ಷೆಗಳನ್ನು ಬರೆಯುತ್ತಿದ್ದು, ಅಶಾಂತಿಯ ವಾತಾವರಣ ಸೃಷ್ಟಿಯಾಗದ ಹಾಗೇ ಅಲ್ಲಲ್ಲಿ ಪೋಲಿಸ್ ಸಿಬ್ಬಂದಿ ನೇಮಕ ಮಾಡಲಾಗಿದೆ.
ಶಾಲೆಗಳಿಗೆ ಸಮವಸ್ತ್ರ ಕಡ್ಡಾಯ ಎಂಬ ಕೋರ್ಟ್ ಆದೇಶವಿದ್ದು, ಆದರೆ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಶಾಲೆಯ ಆವರಣಕ್ಕೆ ಪ್ರವೇಶ ಮಾಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಮರಕ್ಕೆ ಕಡಿವಾಣ ಹಾಕಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆ ಎಲ್ಲಾ ಪ್ರೌಢ ಶಾಲಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು ಆದೇಶಿಸಿದ್ದರು.
ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ, ಪ್ರತಿಭಟನೆ, ಮೆರವಣಿಗೆ, ಪರ ವಿರುದ್ಧ ಘೋಷಣೆ ಕೂಗುವಂತಿಲ್ಲ. ಯಾವುದೇ ವ್ಯಕ್ತಿ, ಜಾತಿ ಧರ್ಮದ ವಿರುದ್ಧ ನಡೆದುಕೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸದ್ಯ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಪ್ರೌಢ ಶಾಲೆಗೆ ಪ್ರಬಾರ ಡಿಡಿಪಿಐ ಗೋವಿಂದ ಮಡಿವಾಳ ಅವರು ಭೇಟಿ ನೀಡಿದ್ದಾರೆ.
ವಿದ್ಯಾರ್ಥಿನಿಯರಿಂದ ಮನವಿ :
''ಈ ಆರು ವಿದ್ಯಾರ್ಥಿನಿಗಳಿಂದಾಗಿ ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಲು ನಮಗೆ ಇಷ್ಟವಿಲ್ಲ, ಶಾಲೆ ಎಂದ ಮೇಲೆ ಎಲ್ಲರಿಗೂ ಒಂದೇ ನಿಯವ ಆ ನಿಯಮವನ್ನು ಎಲ್ಲರು ಪಾಲಿಸಬೇಕು, ಅಲ್ಲದೆ ಈ ಆರು ವಿದ್ಯಾರ್ಥಿನಿಯರು ಭಾಷೆಯ ವಿಚಾರವಾಗಿ ಕಾಲೇಜಿನಲ್ಲಿ ವಿವಾದ ಸೃಷ್ಟಿ ಮಾಡಿದ್ದರು'' ಎಂದು ಅದೇ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಹೇಳಿದ್ದಾರೆ.
ಇನ್ನು ಮುಸ್ಲಿಂ ವಿದ್ಯಾರ್ಥಿನಿಯರು ಡಿಸೆಂಬರ್ ತಿಂಗಳಿನಿಂದ ಹಿಜಾಬ್ ಧರಿಸಲು ಪ್ರಾರಂಭಿಸಿದ್ದು, ಆದರೆ ಇದೀಗ ಅವರು ಹಿಂದೂ ವಿದ್ಯಾರ್ಥಿನಿಯರು ಬೊಟ್ಟು, ಕುಂಕುಮ ತೆಗೆದರೆ ನಾವು ಹಿಜಾಬ್ ಧರಿಸುವುದಿಲ್ಲ ಎಂದು ಸವಾಲು ಹಾಕುತ್ತಿದ್ದಾರೆ. ಈ ವಿವಾದಗಳಿಗೆ ಅಂತ್ಯ ಹಾಡಿ ಎಂದಿನಂತೆ ತರಗತಿ ಆರಂಭ ಮಾಡುವಂತೆ ಪ್ರಿನ್ಸಿಪಾಲರಿಗೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದ್ದಾರೆ.