ಕಾಸರಗೋಡು, ಫೆ. 13 (DaijiworldNews/SM): ಪೆಟ್ರೋಲ್ ಸಾಲ ನೀಡಲಿಲ್ಲ ಎಂದು ತಂಡವೊಂದು ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆಸಿದ ಘಟನೆ ಶನಿವಾರ ರಾತ್ರಿ ಉಳಿಯತ್ತಡ್ಕದಲ್ಲಿ ನಡೆದಿದೆ.
ಬೈಕ್ ನಲ್ಲಿ ಬಂದ ಇಬ್ಬರು 50 ರೂ.ನ ಪೆಟ್ರೋಲ್ ಸಾಲ ಕೇಳಿದ್ದು, ಸಿಬ್ಬಂದಿಗಳು ಪೆಟ್ರೋಲ್ ನೀಡಲು ನಿರಾಕರಿಸಿದಾಗ ಹಲ್ಲೆಗೆ ಮುಂದಾಗಿದ್ದು, ಬಳಿಕ ಅಲ್ಲಿಂದ ಇಬ್ಬರು ತೆರಳಿದ್ದರು. ರಾತ್ರಿ ವಾಹನಗಳಲ್ಲಿ ಬಂದ ತಂಡವು ಬಂಕ್ ಮೇಲೆ ದಾಳಿ ನಡೆಸಿದ್ದು, ಸುಮಾರು ಒಂದು ಲಕ್ಷ ರೂ. ಗಳ ನಷ್ಟ ಉಂಟಾಗಿದೆ ಎಂದು ವಿದ್ಯಾನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ಸಿಸಿ ಟಿವಿ ದೃಶ್ಯಗಳನ್ನು ಕಲೆ ಹಾಕಿರುವ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೃತ್ಯವನ್ನು ಖಂಡಿಸಿ ನಾಳೆ ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ 5 ಗಂಟೆ ತನಕ ಪೆಟ್ರೋಲ್ ಪಂಪ್ ಬಂದ್ ಮಾಡಿ ಪ್ರತಿಭಟನೆ ನಡೆಸಲು ಬಂಕ್ ಮಾಲಕರ ಸಂಘ ತೀರ್ಮಾನಿಸಿದೆ.