ಸವಣೂರು, ಫೆ 13 (DaijiworldNews/KP): ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸರಕಾರಿ ಶಾಲೆಯೊಂದರ ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳಿಗೆ ಶುಕ್ರವಾರ ನಮಾಝ್ ಮಾಡಿದ್ದರುವುದಕ್ಕೆ ವಿರೋಧ ವ್ಯಕ್ತವಾದ, ಬೆನ್ನಲ್ಲೇ ಶನಿವಾರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ನೇತೃತ್ವದಲ್ಲಿ ಎಸ್ಡಿಎಂಸಿ ಪದಾಧಿಕಾರಿಗಳ ಜೊತೆ ತುರ್ತುಸಭೆ ನಡೆಸಲಾಗಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲೆಯಲ್ಲಿ ನಡೆದ ಘಟನೆ ಅನಿರೀಕ್ಷಿತವಾಗಿದೆ, ಮಕ್ಕಳು ನಮಾಜ್ ಮಾಡಿರುವ ವಿಚಾರ ಶಿಕ್ಷಕರ ಗಮನಕ್ಕೆ ಬಂದ ಕೂಡಲೇ ಮೇಲಧಿಕಾರಿಗಳಿಗೆ ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳಿಗೆ ದೂರು ನೀಡಿದ್ದರು, ಈ ನಿಟ್ಟಿನಲ್ಲಿ ಇಂದು ಸಭೆ ನಡೆಸಲಾಗಿದ್ದು, ಎಲ್ಲರು ಒಗ್ಗಟ್ಟಿನಿಂದ ಮುನ್ನಡೆಯುವ ಒಮ್ಮತ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.
ಇನ್ನು ಎಲ್ಲಾ ವರ್ಗದ ಜನರಿಗೆ ಸಮಾನತೆಯಲ್ಲಿ ಶಿಕ್ಷಣ ನೀಡುವುದು ಶೈಕ್ಷಣಿಕ ಧರ್ಮವಾಗಿದೆ, ಶೈಕ್ಷಣಿಕ ಚಟುವಟಿಕೆಗಳು ಹಾಗೂ ಶಾಲಾ ನಿಯಮಗಳ ಬಗ್ಗೆ ಪೋಷಕರಿಗೆ ತಿಳಿಸಲಾಗಿದೆ, ಇನ್ನು ಮುಂದೆ ಶಾಲೆಯಲ್ಲಿ ಯಾವುದೇ ಗೊಂದಲದ ವಾತವರಣ ಸೃಷ್ಟಿಸುವ ಘಟನೆಗಳು ನಡೆಯಬಾರದು ಎಂದು ಎಸ್ಡಿಎಂಸಿ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸುವುದಿಲ್ಲ, ಸರ್ಕಾರಿ ಶಾಲೆಯಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತಮಾಡಿಕೊಳ್ಳುವ ಶಾಲಾಭಿವೃದ್ದಿಯ ನಿಯಮಗಳಿಗೆ ಎಲ್ಲಾ ಪೋಷಕರು ಬದ್ದರಾಗಿದ್ದಾರೆ ಎಂದು ಲೋಕೇಶ್ ಹೇಳಿದರು.
ಶಾಲಾ ಎಸ್ಡಿಎಂಸಿ ಸಭೆಯಲ್ಲಿ ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಸತೀಶ್ ಅಂಗಡಿಮೂಲೆ, ಭರತ್ ರೈ, ಹರಿಕಲಾ ರೈ, ಸುಂದರಿ.ಬಿ.ಎಸ್, ತಾರನಾಥ ಸುವರ್ಣ, ಹರೀಶ್.ಕೆ.ಜೆ, ಚೇತನಾ ಪಾಲ್ತಾಡಿ, ಪಿಡಿಓ ನಾರಾಯಣ.ಬಿ, ಎಸ್ಡಿಎಂಸಿ ಅಧ್ಯಕ್ಷ ಪ್ರವೀಣ್ ಭಂಡಾರಿ, ಎಸ್ಡಿಎಂಸಿ ಉಪಾಧ್ಯಕ್ಷೆ ಶಭೀನಾ ಬಾನು,ಶಾಲಾಭಿವೃದ್ದಿ ನಿಕಟಪೂರ್ವ ಅಧ್ಯಕ್ಷ ಬಿ.ಟಿ.ವಿಶ್ವನಾಥ ಪೂಜಾರಿ, ಮುಖ್ಯ ಶಿಕ್ಷಕಿ ಜಲಜಾ ಮುಂತಾದವರು ಉಪಸ್ಥಿತರಿದ್ದರು.