ಬಂಟ್ವಾಳ, ಫೆ 12 (DaijiworldNews/MS): ಬಿಜೆಪಿಯು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಎದುರಿಸುತ್ತಿದ್ದು, ಅವರು ಸಂತರಾಗಿರುವ ಕಾರಣಕ್ಕೆ ಸಂತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದು, ವಿಶೇಷವೆಂದರೆ ಬಂಟ್ವಾಳ ಮೂಲದ ನಾಗಸಾಧುವೊಬ್ಬರು ಕೂಡ ಕಳೆದ ಹಲವು ಸಮಯಗಳಿಂದ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಬಂಟ್ವಾಳ ಮೂಲದ ತಪೋನಿಧಿ ನಾಗಸಾಧು ಪರಮಪೂಜ್ಯ ಬಾಬಾ ಶ್ರೀ ವಿಠಲಗಿರಿ ಮಹಾರಾಜ್ ಅವರು ಕಳೆದ ಒಂದು ತಿಂಗಳಿನಿಂದ ಯೋಗಿ ಆದಿತ್ಯನಾಥ್ ಪ್ರತಿನಿಧಿಸುವ ಕ್ಷೇತ್ರ ಸೇರಿದಂತೆ ಉತ್ತರಪ್ರದೇಶದ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಯುಪಿಯಲ್ಲಿ ೨ನೇ ಹಂತದ ಚುನಾವಣೆಯು ಫೆ. 14ರಂದು ನಡೆಯಲಿದ್ದು ಹೀಗಾಗಿ ಫೆ. ೧೩ರ ವರೆಗೆ ಪ್ರಚಾರ ಕಾರ್ಯ ನಡೆಸುವುದಾಗಿ ತಿಳಿಸಿದ್ದಾರೆ.
ಶ್ರೀ ವಿಠಲಗಿರಿ ಮಹಾರಾಜ್ ಅವರು ಹರಿದ್ವಾರದಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದಿದ್ದು, ತುಳುನಾಡಿನ ವ್ಯಕ್ತಿಯೊಬ್ಬರು ನಾಗಸಾಧು ಧೀಕ್ಷೆ ಪಡೆದಿರುವುದು ವಿಶೇಷವಾಗಿತ್ತು. ಕಳೆದ ಕೆಲವು ಸಮಯಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ ಅವರು ಹಿಂಜಾವೇ ನಡೆಸುತ್ತಿರುವ ಕಾರಿಂಜ ಕ್ಷೇತ್ರ ಉಳಿಸಿ ಹೋರಾಟದಲ್ಲೂ ಭಾಗಿಯಾಗಿದ್ದರು. ಪ್ರಸ್ತುತ ಉತ್ತರಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದು, ಅವರು ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಅಲ್ಲಿನ ಪ್ರಮುಖರ ನಾಯಕರ ಜತೆಗೆ ಓಡಾಡುತ್ತಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಳೆದ ಒಂದು ತಿಂಗಳಿನಿಂದ ತಾನು ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಂತರು ಪ್ರಚಾರ ನಡೆಸುತ್ತಿದ್ದಾರೆ. ಕರ್ನಾಟಕದಿಂದ ಸಂತನಾಗಿ ತಾನು ಪ್ರಚಾರದಲ್ಲಿ ತೊಡಗಿದ್ದೇನೆ ಎಂದು ಶ್ರೀ ವಿಠಲಗಿರಿ ಮಹಾರಾಜ್ ತಿಳಿಸಿದ್ದಾರೆ.