ಉಡುಪಿ, ಫೆ 12 (DaijiworldNews/KP): ಹಿಜಾಬ್ ನಮ್ಮ ಹಕ್ಕು’ ಎಂಬ ಘೋಷಣೆಗಳ ಮೂಲಕ ಮಹಿಳಾ ಹಕ್ಕುಗಳ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಿಜಾಬ್ ಪರವಾಗಿ ಅಜ್ಜರಕಾಡು ಹುತಾತ್ಮರ ಸ್ಮಾರಕ ಮೈದಾನದಲ್ಲಿ ಫೆಬ್ರವರಿ 7ರಂದು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ರಾಷ್ಟ್ರೀಯ ಮಹಿಳಾ ಮೋರ್ಚಾದ ರಾಜ್ಯ ಪರಿಷತ್ ಸದಸ್ಯೆ ಫಾತಿಮಾ ನಸೀಮ್, ಹಿಜಾಬ್ ನಮ್ಮ ಹಕ್ಕು ಮತ್ತು ಹಿಜಾಬ್ ಅನ್ನು ನಾವು ಹುಟ್ಟಿನಿಂದಲೇ ಧರಿಸುತ್ತಿದ್ದೇವೆ. ಆದರೆ ಈ ವಿವಾದದ ಹಿಂದೆ ಕೇಸರಿ ಶಾಲಿನ ಷಡ್ಯಂತರವಿದೆ. ಇದು ಹಿಜಾಬ್ನ ವಿವಾದವಲ್ಲ ಬದಲಾಗಿ ಕೇಸರಿಗಾಗಿ ಈ ವಿವಾದವನ್ನು ಸಂಘ ಪರಿವಾರದ ಕಾರ್ಯಕರ್ತರು ಆರಂಭಿಸಿದ್ದಾರೆ, ಇದಕ್ಕೆಲ್ಲ ನಾವು ಹೆದರುವುದಿಲ್ಲ ನಮ್ಮ ಮಕ್ಕಳಿಗೆ ಸಂವಿಧಾನ ಬದ್ಧವಾಗಿ ಶಿಕ್ಷಣ ನೀಡುತ್ತೇವೆ ಎಂದಿದ್ದಾರೆ
ಹಿಂದೂ ಹುಡುಗರು ಶಾಲು ಹಾಕುವ ಬದಲು ಸ್ಕಾರ್ಫ್ ಧರಿಸಿಕೊಂಡು ಬರಲಿ, ಇನ್ನೊಂದು ಧರ್ಮವನ್ನು ಗೌರವಿಸುವುದನ್ನು ಕಲಿಯಬೇಕು, ಮುಸ್ಲಿಮರಿಗೆ ಸ್ಕಾರ್ಫ್ ಎಂದರೆ ಗೌರವ ಮತ್ತು ಘನತೆ ಎಂದರ್ಥ ಶಾಲೆಗಳು ದೇವಸ್ಥಾನ ಎಂದ ಮೇಲೆ ಗೌರವಿಸುವುದು ತಪ್ಪೇ? ನಾನು ವಿದ್ಯಾರ್ಥಿಯಾಗಿದ್ದಾಗ ಅಂತಹ ಚರ್ಚೆ ಇರಲಿಲ್ಲ, ಈಗ ಕೋಮು ಭಿನ್ನಾಭಿಪ್ರಾಯ ಸೃಷ್ಟಿಸಲು ವಿವಾದಗಳನ್ನು ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯ ಪಕ್ಷವೊಂದು ವೋಟ್ಗಾಗಿ 'ಬೇಟಿ ಬಚಾವೋ, ಬೇಟಿ ಪಡಾವೋ' ಎಂದು ಹೇಳುವ ಮೂಲಕ ಅಧಿಕಾರಕ್ಕೆ ಬಂದು ಹಕ್ಕನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಹೈಕೋರ್ಟ್ ಸ್ಕಾರ್ಫ್ ಪರವಾಗಿ ಆದೇಶ ನೀಡಿದರೆ ನಾವು ಆದೇಶವನ್ನು ಗೌರವಿಸುತ್ತೇವೆ ಅಥವಾ ನಮ್ಮ ಬೇಡಿಕೆಗೆ ವಿರುದ್ಧವಾಗಿ ಆದೇಶ ಬಂದರೆ ಸುಪ್ರೀಂ ಮೊರೆ ಹೋಗುತ್ತೇವೆ, ನ್ಯಾಯ ಸಿಗುವವರೆಗೆ ಸಾಂವಿಧಾನಿಕ ಹೋರಾಟ ನಡೆಸುತ್ತೇವೆ' ಎಂದು ಫಾತಿಮಾ ಹೇಳಿದ್ದಾರೆ
ಇನ್ನು ಪ್ರತಿಭಟನೆಯಲ್ಲಿ ಮಾತನಾಡಿದ ಸಿಎಫ್ಐ ಜಿಲ್ಲಾ ಉಸ್ತುವಾರಿ ಝಜಾಮ್, ನಮ್ಮ ಸಂವಿಧಾನದ ಹಕ್ಕನ್ನು ಪಡೆದುಕೊಳ್ಳಲು ನಾವು ಯಾರ ಮಾತಿಗೂ ಕಿವಿಕೊಡುವುದಿಲ್ಲ. ಅಲ್ಲದೆ ಹಿಜಾಬ್ ಅನ್ನು ಎಂದಿಗೂ ತೆಗೆದುಹಾಕುವುದಿಲ್ಲ ಮತ್ತು ಇದನ್ನು ಹೀಗೆ ಮುಂದುವರಿಸುತ್ತೇವೆ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ತಮ್ಮ ಬೇಡಿಕೆಗಳ ಈಡೇರಿಸುವಂತೆ ನೂರಾರು ಮಹಿಳೆಯರು ಸ್ಕಾರ್ಫ್ ಧರಿಸಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮುರ್ಷಿದಾ, ಸಿಎಫ್ಐ ರಾಜ್ಯ ಸಮಿತಿ ಸದಸ್ಯೆಯರು ಮತ್ತಿತರರು ಉಪಸ್ಥಿತರಿದ್ದರು.