ವಿಶೇಷ ವರದಿ: ಆರ್.ಬಿ.ಜಗದೀಶ್
ಕಾರ್ಕಳ, ಫೆ 12 (DaijiworldNews/HR): ಅಮೃತಯೋಜನೆಯು ಕಾರ್ಕಳ ನಗರದ ನಾಗರಿಕರ ಪಾಲಿಗೆ ವಿಷಗಳಿಗೆಯಾಗಿದ್ದು, ರಸ್ತೆಗಳಲ್ಲಿ ಕೊಳೆತು ನಾರುತ್ತಿರುವ ತ್ಯಾಜ್ಯದ ಕೊಂಪೆಗಳು ಕಾಣಸಿಗುತ್ತಿದೆ. ಪುರಸಭಾ ಆಡಳಿತದ ಸೂಚನೆಗೆ ನಾಗರಿಕರಿಂದ ಕವಡೆ ಕಾಸಿನ ಬೆಲೆ ಸಿಗದೇ ಹೋಗಿರುವುದು ಈ ಎಲ್ಲಾ ಸಮಸ್ಸೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ.
ಒಣ ಕಸ, ಹಸಿ ಕಸ, ಅಪಾಯಕಾರಿ ಕಸ ಇದರ ಬಗ್ಗೆ ಕಾರ್ಕಳದ ನಾಗರಿಕರಿಕರಿಗೆ ಹಿಂದಿನ ಮುಖ್ಯಾಧಿಕಾರಿಯಾಗಿದ್ದ ರಾಯಪ್ಪ ಪರಿಚಯಿಸಿದ್ದರು. ಇವರು ತಮ್ಮ ಕರ್ತವ್ಯದ ಅವಧಿಯಲ್ಲಿ ತೋರಿದ ಜನಜಾಗೃತಿಗೆ ದೇಶದಿಂದಲೇ ಪ್ರಶಂಸೆ ವ್ಯಕ್ತಪಾಗಿತ್ತು. ಸ್ವಚ್ಚತಾ ಕಾರ್ಯದಲ್ಲಿ 2015ರಲ್ಲಿ ಸ್ವಚ್ಚತಾ ರಾಷ್ಟ್ರೀಯ ಪ್ರಶಸ್ತಿ ಕಾರ್ಕಳ ಪುರಸಭೆಗೆ ಲಭಿಸಿದೆ. 2016ರಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಕುರಿತು ಪಶಸ್ತಿಯು ಕಾರ್ಕಳ ಪುರಸಭೆಗೆ ಒದಗಿ ಬಂದಿತ್ತು.
ಪ್ರಸ್ತುತ ದಿನಗಳಲ್ಲಿ ಆ ಸಂಪ್ರದಾಯ ಮುಂದುವರಿಯುತ್ತಿದ್ದರೂ ಸಮರ್ಪಕವಾಗಿ ನಡೆಯದೇ ಹೋಗಿರುವುದು ಸಮಸ್ಸೆಗೆ ಮೂಲ ಕಾರಣವೆನ್ನಬಹುದು. ವಾರದ ಎರಡು ದಿನ ಮಾತ್ರ ಒಣ ಕಸಗಳನ್ನು ಸಂಗ್ರಹಿಸಲು ಅವಕಾಶ ಇದ್ದು, ಹಸಿ ಕಸಗಳನ್ನು ವಾರದ ಏಳುದಿನಗಳಲ್ಲಿ ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯ ಸಂಗ್ರಹಕ ವಾಹನಕ್ಕೆ ತ್ಯಾಜ್ಯಗಳನ್ನು ವಿಂಗಡಿಸಿ ನೀಡಿದ್ದಲ್ಲಿ ಮಾತ್ರವೇ ಅದನ್ನು ಸಂಗ್ರಹಿಸಲು ಸಾಧ್ಯ ಎಂಬ ಹೊಸ ನಿಯಾಮವನ್ನು ಪುರಸಭಾ ಆಡಳಿತ ಜಾರಿಗೊಳಿಸಿದೆ. ಈ ಕುರಿತು ಕರಪತ್ರಗಳು ಹಾಗೂ ವಾಹನ ಪ್ರಚಾರವನ್ನು ಏರ್ಪಡಿಸಿದೆ.
ಕಾರ್ಕಳ ನಗರದ ಪ್ರದೇಶಗಳಲ್ಲಿ ವಸತಿ ಸಮುಚ್ಚಯ ಹಾಗೂ ವ್ಯಾಪಾರ ಮಳಿಗೆಗಳಲ್ಲಿ ಈ ಸಮಸ್ಸೆ ಹೆಚ್ಚು ಹೆಚ್ಚಾಗಿ ಕಾಡುತ್ತಿದ್ದು, ತ್ಯಾಜ್ಯ ವಿಂಗಡಿಸಿ, ವಾಹನಗಳಿಗೆ ನೀಡಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ತ್ಯಾಜ್ಯ ಸಂಗ್ರಹಿಸದೇ ಹೋಗುತ್ತಿರುವುದರಿಂದ ಅಲ್ಲಲ್ಲಿ ತ್ಯಾಜ್ಯಗಳ ಕಟ್ಟುಗಳೇ ಚೆಲ್ಲಾಪಿಲಿಯಾಗಿ ಬಿದ್ದುಕೊಂಡಿದೆ. ಬೀದಿಗಳು, ಅಲೆಮಾರಿ ಜಾನುವಾರುಗಳು ಆಹಾರ ಹುಡುಕಿಕೊಂಡು ಚೆಲ್ಲಪಿಲ್ಲಿಗೊಳಿಸುತ್ತಿವೆ ಎಂಬ ಆರೋಪ ವ್ಯಾಪಾಕವಾಗಿ ಕೇಳಿಬುತ್ತಿವೆ.
ಪರಿಸರಕ್ಕೆ ಅಪಾಯಕಾರಿ ವಸ್ತುವಾಗಿರುವ ಪ್ಲಾಸ್ಟಿಕ್ ಕವರ್ಗಳನ್ನು ಆಹಾರದ ಜೊತೆಯಲ್ಲಿ ಜಾನುವಾರುಗಳು ಭಕ್ಷಿಸುತ್ತಿರುವುದು ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಅದರ ಜೀವಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಯಾಗಿದೆ.
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಎಸ್ಎಲ್ಆರ್ಎಮ್ ಮಾದರಿಯಲ್ಲಿ ಅನುಷ್ಠಾನಗೊಳಿಸುವ ಸದುದ್ದೇಶ ಕುಂದಾಪುರದ ಟಿಪ್ ಸೆಷನ್ಸ್ ಚಾರಿಟೇಬಲ್ ಟ್ರಸ್ಟ್ಗೆ ನೀಡಿದೆ. 2021 ನವಂಬರ್ 1ರಂದು ಅನ್ವಯವಾಗುವಂತೆ ಸಂಸ್ಥೆಗೆ ಕರಾರಿನ ಮೇರೆಗೆ ಬಿಟ್ಟು ಕೊಡಲಾಗಿದೆ. ಅಲ್ಲಿ ತ್ಯಾಜ್ಯ ವಿಂಗಡಣೆ ಕಾರ್ಯವನ್ನು ಟಿಪ್ ಸೆಷನ್ಸ್ ಚಾರಿಟೇಬಲ್ ಟ್ರಸ್ಟ್
ನ ಕಾರ್ಮಿಕರು ನಡೆಸುತ್ತಿದ್ದಾರೆ.
ಪುರಸಭೆಯಿಂದ ಪ್ರತಿದಿನ ಸಂಗ್ರಹವಾಗುತ್ತಿರುವ 13.40 ಟನ್ ಹಸಿ ತ್ಯಾಜ್ಯವನ್ನು ಪುರಸಭಾ ಖಾಯಂ ಹಾಗೂ ಹೊರಗುತ್ತಿಗೆದಾರುವ ಪುರಸಭಾ ವಾಹನದಲ್ಲಿ ಡಂಪಿಂಗ್ ಯಾರ್ಡ್ಗೆ ತಂದು ಹಾಕುತ್ತಿದ್ದಾರೆ. ಈಗಾಗಲೇ 10 ಮಂದಿ ಟಿಪ್ ಸೆಷನ್ಸ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ಕಾರ್ಮಿಕರು ಒಳಗೊಂಡಂತೆ 20 ಮಂದಿ ಕಾಯಂ ಪೌರ ಕಾರ್ಮಿಕರು, 18 ಮಂದಿ ಹೊರಗುತ್ತಿಗೆಯ ಆಧಾರದಲ್ಲಿ ಪೌರಕಾರ್ಮಿಕರು ಒಟ್ಟು 48 ಮಂದಿ ಸ್ವಚ್ಚತಾ ವಿಭಾಗದಲ್ಲಿ ದುಡಿಯುತ್ತಿದ್ದಾರೆ.
2015ರಲ್ಲಿ ಇದ್ದಂತೆ ಪ್ರತಿದಿನವೂ ಒಣ, ಹಸಿ, ಅಪಾಯಕಾರಿ ಕಸಗಳನ್ನು ಸಂಗ್ರಹಿಸುವುದಕ್ಕೆ ಪುರಸಭಾ ಆಡಳಿತ ವರ್ಗ ಮುಂದಾಗಬೇಕು. ಅದನ್ನು ಪ್ರತೇಕಿಸಿ ವಾಹನಕ್ಕೆ ಒದಗಿಸಿಕೊಡುವ ಮೂಲಕ ಶಾಶ್ವತ ಪರಿಹಾರ ಸಿಗಲಿದೆ.
ಈಗಾಗಲೇ ಕೆಲ ವಸತಿ ಸಮುಚ್ಚಯಗಳಿಗೆ ರೂ.5,000 ದಂಡ ವಿಧಿಸಿ ಎಚ್ಚರಿಕೆ ನೀಡಿಲಾಗಿದೆ. ಒಣ,ಹಸಿ,ಅಪಾಯಕಾರಿ ತ್ಯಾಜ್ಯಗಳನ್ನು ಬೇರ್ಪಡಿಸಿ ಕ್ಲಪ್ತ ಸಮಯದಲ್ಲಿ ನೀಡಲೇ ಬೇಕು. ಅದನ್ನು ಉಲ್ಲಂಘಿಸಿದಾಗ ಈ ಸಮಸ್ಸೆ ಎದುರಾಗುತ್ತಿದೆ. ಅದಕ್ಕೆ ಪುರಸಭೆ ಹೊಣೆಯಾಗಿರುವುದಿಲ್ಲ ಎಂದು ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಹೇಳಿದ್ದಾರೆ.
ಸ್ವಚ್ಛ ಕಾರ್ಕಳ, ಸುಂದರ ಕಾರ್ಕಳ ಎಂಬ ಸಚಿವ ವಿ.ಸುನೀಲ್ ಕುಮಾರ್ ಅವರ ಪರಿಕಲ್ಪನೆ ಸಕಾರಗೊಳ್ಳುವುದಕ್ಕೆ ಕಾರ್ಕಳ ಪುರಸಭೆ ಬದ್ಧವಾಗಿದೆ. ಯಾವುದೇ ನ್ಯೂನತೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಕಾರ್ಕಳ ಪುರಸಭೆ ಅಧ್ಯಕ್ಷರಾದ ಸುಮಕೇಶವ ಹೇಳಿದ್ದಾರೆ.