ಬೈಂದೂರು, ಫೆ 12 (DaijiworldNews/HR): ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಠಾಣೆಯ ಪೊಲೀಸರು ವ್ಯಕ್ತಿಯೋರ್ವನನ್ನು ಫೆ.10ರ ಗುರುವಾರ ಸಂಜೆ ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.
ನಾವುಂದ ಗ್ರಾಮದ ಅರೆಹೊಳೆಯಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ನಡೆಯುತ್ತಿದ್ದುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರೋಪಿ ರವೀಂದ್ರ ಪೂಜಾರಿ ಮಹೀಂದ್ರಾ ಮ್ಯಾಕ್ಸಿಮೋ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದು, ಬೆಳಗ್ಗೆ ಹಲಗೇರಿ ಗ್ರಾಮದಿಂದ ಎರಡು ಹಾಗೂ ಮುಳ್ಳಿಕಟ್ಟೆ ಗ್ರಾಮದಿಂದ ಇನ್ನೆರಡು ಹಸುಗಳನ್ನು ಸಾಗಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಅಕ್ರಮ ಸಾಗಾಟದ ಬಗ್ಗೆ ಸುಧಾಕರ ಶೆಟ್ಟಿ ನೆಲ್ಯಾಡಿ, ವೇದನಾಥ ಶೆಟ್ಟಿ, ದಿನೇಶ್ ಪೂಜಾರಿ ಮೊದಲಾದವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.