ಕಾರ್ಕಳ, ಫೆ 11 (DaijiworldNews/HR): ನ್ಯೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್ ಅವರು ಬಾಹುಬಲಿ ಸ್ವಾಮಿಯ ಬಗ್ಗೆ ನೀಡಿದ ಹೇಳಿಕೆ ಖಂಡನೀಯ . ವಿಶ್ವಕ್ಕೆ ತ್ಯಾಗ ಮತ್ತು ಅಹಿಂಸೆಯ ಸಂದೇಶವನ್ನು ಸಾರಿದ ಬಾಹುಬಲಿ ನಮ್ಮ ದೇಶದ ಸಂಸ್ಕೃತಿಯ ಪ್ರತೀಕ, ಕೇವಲ ಜೈನ ಸಮುದಾಯ ಮಾತ್ರವಲ್ಲದೆ ಎಲ್ಲಾ ಧರ್ಮದವರಿಂದಲೂ ಪೂಜಿಸಲ್ಪಡುವ ಮಹಾನ್ ಶಕ್ತಿ. ಈ ನೆಲದ ಪ್ರತಿ ಕಣ ಕಣದಲ್ಲೂ ನಾವು ಬಾಹುಬಲಿಯ ಸ್ಫೂರ್ತಿಯನ್ನು ಕಾಣುತ್ತೇವೆ. ಹೇಳಿಕೆ ಹಿಂತೆಗೆದುಕೊಂಡು ಕ್ಷಮೆ ಕೇಳಬೇಕು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಒತ್ತಾಯಿಸಿದ್ದಾರೆ.
ಶುಭದರಾವ್
ಈ ಕುರಿತು ಮಾತನಾಡಿದ ಅವರು, ಅಯೂಬ್ ಖಾನ್ ನಿಂದ ಸ್ಥಾಪಿಸಲ್ಪಟ್ಟ ನ್ಯೂ ಕಾಂಗ್ರೆಸ್ ಪಕ್ಷವನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜೊತೆ ತಳುಕು ಹಾಕಿ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಕ್ಷೇತ್ರಾದ್ಯಕ್ಷರ ಹೇಳಿಕೆ ಮೂರ್ಖತನದ ಪರಮಾವಧಿಯಾಗಿದೆ. ತನ್ನ ಪೂರ್ವಗ್ರಹ ಪೀಡಿತ ಹೇಳಿಕೆಯಿಂದ ನಗೆಪಾಟಲಿಗೆ ಈಡಾಗಿರುವ ಬಿಜೆಪಿ ಕ್ಷೇತ್ರಾದ್ಯಕ್ಷರು ಜೈನ ಸಮುದಾಯದ ದಿಕ್ಕನ್ನು ತಪ್ಪಿಸುವ ಪ್ರಯತ್ನ ಫಲ ಕೊಡದು, ಜೈನ ಸಮಾಜದವರು ಅತ್ಯಂತ ವಿದ್ಯಾವಂತರೂ, ಬುದ್ದಿವಂತರೂ ಆಗಿದ್ದಾರೆ. ಸಮಾಜದ ಏಳಿಗೆಗೆ ಅವರ ಕೊಡುಗೆ ಅಪಾರ ಹಾಗಾಗಿ ಸಮಾಜದಲ್ಲಿ ಒಡಕು ತರುವ ಪ್ರಯತ್ನ ನಿಲ್ಲಿಸಿ ತಮ್ಮ ಸಾಮಾನ್ಯ ಜ್ಞಾನದ ಕಡೆಗೆ ಗಮನ ಕೊಡಬೇಕು ಎಂದಿದ್ದಾರೆ.
ಇನ್ನು ಯಾರೋ ಹೆಸರಿಲ್ಲದ ವ್ಯಕ್ತಿ ಮಾಡಿದ ಅಸಂಬದ್ಧ ಹೇಳಿಕೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜೊತೆ ತಳಕು ಹಾಕುವ ದುರ್ಬುದ್ದಿ ತೊಲಗಿ ಒಳ್ಳೆಯ ಬುದ್ಧಿಯನ್ನು ಕಾರ್ಕಳ ಗೋಮಟೇಶ್ವರ ಕರುಣಿಸಲಿ ಎಂದು ಅವರ ಪ್ರಾರ್ಥಿಸಿಕೊಂಡಿದ್ದಾರೆ.