ಮಂಗಳೂರು, ಫೆ 10 (DaijiworldNews/HR): ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಬ್ಬರ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ತಿಳಿಸಿದ್ದಾರೆ.
ಸಮಾಜ ವಿದ್ರೋಹಿ ಕೃತ್ಯ ಮತ್ತು ಸಾರ್ವಜನಿಕ ಶಾಂತಿ ಸುವ್ಯವಸ್ಥೆ ನಿಟ್ಟಿನಲ್ಲಿ ರೋಹಿದಾಸ್ ಅಲಿಯಾಸ್ ಆಕಾಶ್ ಭವನ್ ಶರಣ್, ಸುರತ್ಕಲ್ ಪಿಂಕ್ ನವಾಜ್ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.
ಈ ಹಿಂದೆ ನಗರದಲ್ಲಿನ 1250 ಕ್ಕೂ ಹೆಚ್ಚು ರೌಡಿ ಶೀಟ್ ತೆರವುಗೊಳಿಸಿದ್ದು, 500 ಕ್ಕೂ ಹೆಚ್ಚು ಎಂಓಬಿ ಪ್ರಕರಣ ವಿಡ್ರಾ ಮಾಡಲಾಗಿತ್ತು.ಇದೀಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಬ್ಬರ ಮೇಲೆ ಗೂಂಡಾ ಕಾಯ್ದೆ ಹೇರಿಕೆ ಮಾಡಲಾಗಿದೆ.
ಆಕಾಶ್ ಭವನ್ ಶರಣ್ ಮೇಲೆ ಕೊಲೆ, ಕೊಲೆ ಯತ್ನ, ರೇಪ್, ಪೋಕ್ಸೊ,ದರೋಡೆ ಸುಲಿಗೆ ಸೇರಿ 20ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ನಗರ ಪೊಲೀಸ್ ಇಲಾಖಾ ವ್ಯಾಪ್ತಿಯಲ್ಲಿ 15 ಪ್ರಕರಣ, ದ.ಕ ಜಿಲ್ಲೆಯಲ್ಲಿ 2, ಉಡುಪಿ 2 ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಸುರೇಂದ್ರ ಬಂಟ್ವಾಳ್ ಕೊಲೆಯಲ್ಲಿ ಬಂಧಿತನಾಗಿದ್ದು, ಶರಣ್ ಮೇಲೆ ನಗರದ ನಾಲ್ಕಕ್ಕೂ ಹೆಚ್ಚು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ವಿಜಯ್ ಪುರ ಕೇಂದ್ರ ಕಾರಾಗೃಹದಲ್ಲಿ ಶರಣ್ ಬಂಧಿಯಾಗಿದ್ದು, ಆತ ಜೈಲಿನಿಂದಲೇ ಕೆಲವು ಪ್ರಕರಣಕ್ಕೆ ಕುಮ್ಮಕ್ಕು ನೀಡುತ್ತಿದ್ದರಿಂದ ಆತನ ವಿರುದ್ಧ ಮೇಲೆ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.
ಮತ್ತೊಬ್ಬ ಆರೋಪಿ ಸುರತ್ಕಲ್ ಕಾಟಿಪಳ್ಳ ಮಹಮ್ಮದ್ ನವಾಝ್ ಅಲಿಯಾಸ್ ಪಿಂಕಿ ನವಾಝ್ ಮೇಲೆ 2015 ರಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಮಂಗಳೂರು ನಗರ ಪೊಲೀಸದ ವ್ಯಾಪ್ತಿಯಲ್ಲಿ 12 ಪ್ರಕರಣ, ದ.ಕ 1 ಪ್ರಕರಣ ದಾಖಲಾಗಿದೆ.
ಇನ್ನು ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಬಂಧಿಯಾಗಿ ನಿನ್ನೆ ಬಿಡುಗಡೆಗೊಂಡಿದ್ದ ಪಿಂಕಿ ನವಾಝ್ ವಿರುದ್ದ ಗೊಂಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನನ್ನು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ.