ಉಡುಪಿ, ಫೆ 10 (DaijiworldNews/HR): ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಸಂವಿಧಾನದ ಚೌಕಟ್ಟಿನಲ್ಲಿ ಬಗೆಹರಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಹೇಳಿದೆ.
ಈ ಕುರಿತು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೆಬ್ ಕೋಟ, ಇದ್ರಿಸ್ ಹೂಡೆ, ಮಹಮ್ಮದ್ ಮೌಲಾ ಮತ್ತಿತರರು ಸುದ್ದಿಗೋಷ್ಟಿ ನಡೆಸಿ ಠರಾವು ಮಂಡಿಸಿದ್ದು, ಪ್ರೌಢಾವಸ್ಥೆಗೆ ತಲುಪಿದ ಹೆಣ್ಣು ಮಕ್ಕಳಿಗೆ ಇಸ್ಲಾಮ್ ಧರ್ಮದಲ್ಲಿ ಶಿರವಾಧಾರಣೆ ಧಾರ್ಮಿಕ ಕರ್ತವ್ಯವಾಗಿದೆ. ಇದಕ್ಕೆ ದೇಶದ ಸಂವಿಧಾನವೂ ಮುಕ್ತ ಅವಕಾಶ ನೀಡಿದೆ. ಆದ್ದರಿಂದ ದೇಶದ ಸಂವಿಧಾನದಕ್ಕನುಸಾರವಾಗಿ ನಡೆಯುವ ಯಾವುದೇ ಸಂಸ್ಥೆಯು ಇದಕ್ಕೆ ಅಡ್ಡಿಯುಂಟು ಮಾಡಬಾರದು ಎಂದರು.
ಇನ್ನು ವಿದ್ಯಾಸಂಸ್ಥೆಗಳಿಗೆ ಸಂಬಂಧಿಸಿದ ಯಾವುದೇ ನಿಯಮ ಅಥವಾ ಉಪನಿಯಮಗಳನ್ನು ಯಾವುದೇ ಜಾತಿ, ಧರ್ಮ, ವರ್ಗ, ಸಮುದಾಯ, ಅಥವಾ ಸಂಪ್ರದಾಯದವರು ತಮ್ಮ ಶಿಕ್ಷಣದ ಹಕ್ಕಿನಿಂದ ವಂಚಿತರಾಗದಂತೆ ಸಂವೇದನಾಶೀಲವಾಗಿ ರಚಿಸಬೇಕು. ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಉದ್ದೇಶ ಮಕ್ಕಳಿಗೆ ಶಿಕ್ಷಣ ನೀಡುವುದು ಆಗಿರಬೇಕೇ ಹೊರತು ಇತರರ ಆಚರಣೆಗಳನ್ನು ತಡೆಯುವುದು ಅಥವಾ ತಮ್ಮ ಆಚರಣೆಗಳನ್ನು ಅವರ ಮೇಲೆ ಹೇರುವುದು ಆಗಿರಬಾರದು ಎಂದಿದ್ದಾರೆ.
ಭಾರತದಂತಹ ವೈವಿಧ್ಯಪೂರ್ಣ ದೇಶದಲ್ಲಿ ಶಿಕ್ಷಣ ಸಂಬಂಧಿ ನಿಲುವು ಮತ್ತು ನಿಯಮಗಳು ಸಾಂಸ್ಕೃತಿಕ, ಸಾಮುದಾಯಿಕ ಮತ್ತು ಸ್ಥಳೀಯ ನಂಬಿಕೆಗಳು, ಭಾವನೆಗಳು ಮತ್ತು ಆಚರಣೆಗಳ ಬಗ್ಗೆ ಸಂವೇದನಾಶೀಲವಾಗಿರಬೇಕು. ಸ್ಕಾರ್ಫ್ ಧಾರಣೆ ಯಾವುದೇ ಸಮವಸ್ತ್ರ ಸಂಹಿತೆಯನ್ನು ಉಲ್ಲಂಘಿಸುವುದಿಲ್ಲ. ಸ್ಕಾರ್ಫ್ ಧರಿಸಬಯಸುವ ವಿದ್ಯಾರ್ಥಿನಿಯರು ಶಾಲೆಯ ಸಮವಸ್ತ್ರ ನಿಯಮದಲ್ಲಿ ತಿಳಿಸಲಾಗಿರುವ ಬಣ್ಣಕ್ಕೆ ಅನುಸಾರವಾದ ಸ್ಕಾರ್ಫ್ ಧರಿಸಲು ಸಿದ್ಧರಾಗಿದ್ದು ಅವರ ಈ ಬೇಡಿಕೆ ನ್ಯಾಯೋಚಿತವಾಗಿದೆ ಎಂಬುದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ನಿಲುವಾಗಿದೆ.
ಇನ್ನು ಒಟ್ಟು ಸಮಾಜ ಮತ್ತು ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮುಸ್ಲಿಂ ಸಮಾಜದ ನಾಯಕರು ಮತ್ತು ಸಂಘಟನೆಗಳು ವ್ಯಕ್ತಿಗತವಾಗಿ ಅಥವಾ ಕೇವಲ ತಮ್ಮ ಸಂಘಟನೆಯ ಮಟ್ಟದಲ್ಲಿ ನಿರ್ಣಯಗಳನ್ನು ಕೈಗೊಳ್ಳದೆ ಸಮುದಾಯದ ಇತರ ಸಂಘಟನೆಗಳೊಂದಿಗೆ ಸಮಾಲೋಚಿಸಿ ಸಾಮೂಹಿಕ ನಿರ್ಣಯಗಳಿಗೆ ಅನುಸಾರವಾದ ನಿಲುವನ್ನು ತಳೆಯಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟವು ಆಗ್ರಹಿಸಿದೆ.
ರಾಜಕೀಯ ಪಕ್ಷಗಳು ಮತ್ತು ಅವುಗಳಿಂದ ಬೆಂಬಲಿತ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ನಡೆಸಬಾರದು ಮತ್ತು ವಿದ್ಯಾರ್ಥಿಗಳ ಧಾರ್ಮಿಕ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯುವ ಅಥವಾ ವಿದ್ಯಾರ್ಥಿಗಳನ್ನು ಪರಸ್ಪರ ಸಂಘರ್ಷಕ್ಕೆ ಪ್ರಚೋದಿಸುವಂತಹ ಚಟುವಟಿಕೆಗಳನ್ನು ನಡೆಸಬಾರದು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟವು ಆಗ್ರಹಿಸುತ್ತದೆ ಎಂದರು.
ಒಕ್ಕೂಟದ ಉಪಾಧ್ಯಕ್ಷ ಇದ್ರಿಸ್ ಹೂಡೆ ಮಾತನಾಡಿ, ವಿದ್ಯಾರ್ಥಿನಿಯರ ಅವರ ಪೋಷಕರು ಮತ್ತು ಶಾಸಕರ ಮನವೊಲಿಸಲು ನಾವು ಪ್ರಯತ್ನಿಸಿದ್ದೇವೆ . ನಾವು ಅವರನ್ನು ಹಿಜಾಬ್ ಧರಿಸುವಂತೆ ಒತ್ತಾಯಿಸುವುದಿಲ್ಲ ಆದರೆ ಅದನ್ನು ಧರ್ಮವಾಗಿ ಆಚರಿಸಿದರೆ ಸರ್ಕಾರ ಅದನ್ನು ಧರಿಸಲು ಅವಕಾಶ ನೀಡಬೇಕು ಎಂದಿದ್ದಾರೆ.
ಇನ್ನು ಶಿಕ್ಷಣವನ್ನು ಮುಂದುವರಿಸಲು ಅವಕಾಶ ನೀಡು. ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ನಾವು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ. ನಾವು ನಾಲ್ಕು ಬಾರಿ ಡಿಸಿ ಮತ್ತು ಡಿಡಿಪಿಯು ಅವರನ್ನು ಭೇಟಿ ಮಾಡಿದ್ದೇವೆ. ತೀರ್ಪಿಗೆ ಮುನ್ನ ನಾನು ನ್ಯಾಯಾಲಯದ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಮೊದಲು ತೀರ್ಪು ಬರಲಿ ಎಂದು ಹೇಳಿದ್ದಾರೆ.