ಪುತ್ತೂರು, ಫೆ 10 (DaijiworldNews/HR): ದೆಹಲಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಸಾಸ್ಕೃತಿಕ ಕಾರ್ಯಕ್ರಮದಲ್ಲಿ ಗೋವಾ ಮತ್ತು ಕರ್ನಾಟಕ ಡೈರೆಕ್ಟೊರೇಟ್ ಅನ್ನು ಪ್ರತಿನಿಧಿಸಿದ್ದ, ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪ್ರಥಮ ಪದವಿ ವಿದ್ಯಾರ್ಥಿನಿ ಜ್ಯೂನಿಯರ್ ಅಂಡರ್ ಆಫೀಸರ್ ಹೇಮಸ್ವಾತಿ ಅವರನ್ನು ಅದ್ಧೂರಿ ಮೆರವಣಿಗೆಯೊಂದಿಗೆ ಕಾಲೇಜಿಗೆ ಸ್ವಾಗತಿಸಿ, ಗೌರವಿಸಲಾಯಿತು.
ಪುತ್ತೂರು ಬಸ್ ನಿಲ್ದಾಣದಿಂದ ತೆರೆದ ವಾಹನದಲ್ಲಿ, ಎನ್ಸಿಸಿ ಹಾಗೂ ರೇಂಜರ್ಸ್ ರೋವರ್ಸ್ ತಂಡಗಳ ಗೌರವಾರ್ಪಣೆಗಳೊಂದಿಗೆ, ವಿದ್ಯಾರ್ಥಿ ನಾಯಕರ ನೇತೃತ್ವದಲ್ಲಿ ಮೆರವಣಿಗೆಯೊಂದಿಗೆ ನೆಹರು ನಗರದಲ್ಲಿರುವ ವಿವೇಕಾನಂದ ಕಾಲೇಜಿನ ಮುಖ್ಯ ವೇದಿಕೆಗೆ ಕರೆತರಲಾಯಿತು. ಬಳಿಕ ಅಭಿನಂದನಾ ಕಾರ್ಯಕ್ರಮ ನಡೆಯಿತು.
ವಿಶೇಷ ಸಾಧನೆಗೈದ ವಿದಾರ್ಥಿನಿಯನ್ನು ಅಭಿನಂದಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಎನ್.ಸಿಸಿ. ಎನ್.ಎಸ್.ಎಸ್. ರೋವರ್ಸ್ & ರೇಂಜರ್ಸ್, ರೆಡ್ ಕ್ರಾಸ್ ಹಾಗೂ ಇತರ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯುನಿವರ್ಸಿಟಿ , ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ನಮ್ಮ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವತ್ತು ನಮ್ಮ ಕಾಲೇಜಿನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಿದ್ದು ಹೇಮಸ್ವಾತಿ. ಅದಕ್ಕಾಗಿ ಅವರ ತಂದೆ ತಾಯಿ ಬಹಳ ಶ್ರಮಪಟ್ಟಿದ್ದಾರೆ. ಸಾಧನೆಯ ಹಾದಿಗೆ ಹೆತ್ತವರ, ವಿದ್ಯಾಲಯದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಬಹಳ ಮುಖ್ಯ ಎಂದರು.
ಗೌರವವನ್ನು ಸ್ವೀಕರಿಸಿ ಮಾತನಾಡಿದ ಜ್ಯೂನಿಯರ್ ಅಂಡರ್ ಆಫೀಸರ್ ಹೇಮಸ್ವಾತಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾವು ನಡೆಸಿದ ಅಭ್ಯಾಸ, ಅದರ ಅನುಭವಗಳು ಹಾಗೂ ಪೋಷಕರ, ಗುರುಗಳ ಹಾಗೂ ವಿದ್ಯಾಲಯದ ಪ್ರೋತ್ಸಾಹವನ್ನು ಮೆಲುಕು ಹಾಕಿದರು.
ಬಿಎ ವಿದ್ಯಾರ್ಥಿ ಮಂಜುನಾಥ್ ಅಭಿನಂದನಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಸಂದರ್ಭ ಕಾಲೇಜಿನ ಎನ್ಸಿಸಿ ಅಧಿಕಾರಿ ಲೆ. ಭಾಮಿ ಅತುಲ್ ಶೆಣೈ, ಹೇಮಸ್ವಾತಿ ಹೆತ್ತರವರು, ಪೋಷಕರು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.