ಉಡುಪಿ, ಫೆ. 09 (DaijiworldNews/SM): ಕಾಲೇಜಿನಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಕರಣ ಹೈಕೋರ್ಟ್ ತ್ರಿ ಸದಸ್ಯ ಪೀಠಕ್ಕೆ ವರ್ಗಾವಣೆಗೊಂಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೋರ್ಟ್ ಮೆಟ್ಟಿಲೇರಿರುವ ಉಡುಪಿಯ ವಿದ್ಯಾರ್ಥಿನಿ ಆಲಿಯಾ ಅಸಾದಿ ನಮಗೆ ಕೋರ್ಟ್ ಮೇಲೆ ನಂಬಿಕೆ ಇದೆ. ನ್ಯಾಯಮೂರ್ತಿಗಳು ಸಂವಿಧಾನವನ್ನು ಎತ್ತಿ ಹಿಡಿಯಲಿದ್ದು, ನಮಗೆ ನ್ಯಾಯ ಒದಗಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಇಷ್ಟೊಂದು ವಿವಾದ ನಡೆಯಲು ಉಡುಪಿಯಲ್ಲಿ ಶಾಸಕರು ನೀಡಿರುವ ಹೇಳಿಕೆಯೇ ಕಾರಣವೆಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ನಾವು ನಮ್ಮ ಸಂವಿಧಾನಾತ್ಮಕ ಹಕ್ಕನ್ನು ಮಾತ್ರ ಕೇಳುತ್ತಿದ್ದೇವೆ. ಸಂವಿಧಾನಾತ್ಮಕ ಹಕ್ಕು ಪಡೆಯಲು ನಾವು ಎಷ್ಟು ಹೋರಾಟ ಮಾಡಬೇಕು? ಎಂದು ಪ್ರಶ್ನಿಸಿದ ವಿದ್ಯಾರ್ಥಿನಿ ಹೈಕೋರ್ಟ್ ನ ಆದೇಶ ವನ್ನು ನಾವು ಬಹಳ ನಿರೀಕ್ಷೆ ಮಾಡಿದ್ದೇವೆ.
ಹೈಕೋರ್ಟ್ ನಿಂದ ಆದಷ್ಟು ಬೇಗ ತೀರ್ಪು ಬರಲಿ. ನಮ್ಮ ಶಿಕ್ಷಣದ ಮೇಲೆ ದೊಡ್ಡ ಪರಿಣಾಮ ಆಗುತ್ತಿದೆ. ಈಗಾಗಲೇ ಪರೀಕ್ಷೆಗಳನ್ನು ಕಾಲೇಜು ಘೋಷಣೆ ಮಾಡಿದೆ. ಹೆಡ್ ಸ್ಕಾರ್ಫ್ ವಿಚಾರದಲ್ಲಿ ಬೇಗ ತೀರ್ಪು ಬರಲಿ. ಇದೊಂದು ದೊಡ್ಡ ವಿಷಯವೇ ಅಲ್ಲ. ಈ ಪ್ರಕರಣ ಇಷ್ಟು ದೊಡ್ಡದಾಗಿ ಯಾಕೆ ಆಯಿತು ಎಂದು ಗೊತ್ತಾಗುತ್ತಿಲ್ಲ. ನಮಗೆ ಇದೇ ತಿಂಗಳಲ್ಲಿ ಪ್ರ್ಯಾಕ್ಟಿಕಲ್ ಲ್ಯಾಬ್ ಪರೀಕ್ಷೆ ಇದೆ. ಮನೆಯಲ್ಲಿ ನಮಗೆ ಓದಲು ಸಾಧ್ಯವಿಲ್ಲ. ನಮಗೆ ಏಕಾಗ್ರತೆ ಮಾಡಲು ಆಗುತ್ತಿಲ್ಲ ಎಂದರು.