ಕಾರ್ಕಳ, ಫೆ 08 (DaijiworldNews/HR): ಕೌಟುಂಬಿಕ ಕಲಹಕ್ಕೆ ಸಂಬಬಂಧಿಸಿದಂತೆ ಇತ್ತಂಡ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಿಸಲಾಗಿದೆ.
ಕುಕ್ಕುಂದೂರು ಅಯ್ಯಪ್ಪ ನಗರದ ರೂಪಲತಾ (38) ಎಂಬವರು ಪ್ರಕರಣವೊಂದರ ದೂರುದಾರರಾಗಿದ್ದು, ಪತಿ ಕಿರಣ್ ಕುಮಾರ್ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದಾರೆ. ಅದೇ ಮನೆಯಲ್ಲಿ ಅತ್ತೆ ಜಾನಕಿ, ಮಾವ ದಾಮೋದರ, ಗಂಡನ ಅಕ್ಕ ಮಂಜಳಾ ಮತ್ತು ಮಂಜುಳಾಳ ಗಂಡ ಆರ್ಮುಗಂ ಎಂಬವರು ಸಹಾ ವಾಸವಾಗಿದ್ದಾರೆ.
ಫೆಬ್ರವರಿ 7 ರಂದುಗಂಟೆಗೆ ರೂಪಲತಾ ರವರು ಮನೆಯೊಳಗೆ ನೆಲವನ್ನು ಒರೆಸಿ ನೀರು ಚೆಲ್ಲಲು ಮನೆಯ ಹೊರಗೆ ಅಂಗಳಕ್ಕೆ ಹೋದಾಗ ಗಂಡನ ಅಕ್ಕ ಮಂಜುಳಾ ಒಂದು ಅಲ್ಯೂಮಿನಿಯಂ ಪಾತ್ರೆಯಲ್ಲಿ ತಯಾರು ಮಾಡಿ ಇಟ್ಟಿದ್ದ ಸೆಗಣಿ ನೀರನ್ನು ತಂದು ರೂಪಲತಾ ರವರ ತಲೆಯ ಮೇಲೆ ಸುರಿದಿದ್ದಾರೆ. ಅದೇ ಪಾತ್ರೆಯಿಂದ ತಲೆಗೆ ಹೊಡೆದ ಪರಿಣಾಮ ತಲೆಗೆ ಹೊಡೆದು ಗಾಯಗೊಳಿಸಿರುತ್ತಾರೆ. ಹೀಗೆಯೇ ಹೊಡೆದು ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅದೇ ಸಂದರ್ಭದಲ್ಲಿ ಮಂಜುಳಾಳ ಗಂಡ ಆರ್ಮುಗಂ ಎಂಬಾತ ರೂಪಲತಾ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಗಾಯಗೊಂಡ ರೂಪಾಲತಾ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಇನ್ನು ಮನೆಯಂಗಳದಲ್ಲಿ ಇದ್ದ ತುಳಸಿಕಟ್ಟೆಗೆ ಜಾನಕಿ(65) ಕೈ ಮುಗಿಯುತ್ತಿದ್ದಾಗ, ಇವರ ಸೊಸೆ ರೂಪಲತಾ ಮನೆ ತೊಳೆದ ನೀರು ತಂದು ಜಾನಕಿರವರ ಮೇಲೆ ಮತ್ತು ತುಳಸಿಕಟ್ಟೆಯ ಮೇಲೆ ಅಪವಿತ್ರಗೊಳಿಸಿರುತ್ತಾರೆ.
ಈ ಕುರಿತು ಜಾನಕಿ ಅವರ ಮಗ ಕಿರಣ್ ಕುಮಾರ್ ಅವನಲ್ಲಿ ಪತ್ನಿಯ ಕೃತ್ಯದ ಕುರಿತು ವಿಚಾರ ತಿಳಿಸುತ್ತಿದ್ದಂತೆ, ಕುಪಿತಗೊಂಡ ಆತ ಪಿಕಾಸಿ ಹಿಡಿದುಕೊಂಡು ಬಂದು ತುಳಸಿಕಟ್ಟೆಯನ್ನು ಒಡೆದು ಹಾಕಲು ಪ್ರಯತ್ನಿಸಿ ಮನೆಯ ಗೋಡೆ ಮತ್ತು ಕನ್ನಡಿಗಳನ್ನು ಒಡೆದು ಹಾಕಿದ್ಡಾನೆ. ಅದೇ ವೇಳೆಗೆ ಜಾನಕಿಗೆ ಮಗ ಕಿರಣ್ ಕುಮಾರ್ ಹಾಗೂ ಆತನ ಪತ್ನಿ ರೂಪಲತಾ ಕೊಡಪಾನದಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದು ಆರೋಪಿಸಲಾಗಿದೆ.