ಉಡುಪಿ, ಫೆ 08 (DaijiworldNews/HR): ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಸಂಘರ್ಷದ ಕೇಂದ್ರಗಳು ಆಗಬಾರದು. ಆರು ವಿದ್ಯಾರ್ಥಿನಿಯರು ರಾಜ್ಯದ ಸ್ವಾಸ್ಥ್ಯ ಕೆಡಿಸಿದ್ದಾರೆ. ಪೋಷಕರ ಮತ್ತು ಮಕ್ಕಳ ಸಭೆ ನಡೆಸಿದರೂ ಆರು ಮಕ್ಕಳು ಹಾದಿ ತಪ್ಪಿ ಹಠಮಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕೋರ್ಟ್ ಆದೇಶ ಎಲ್ಲರೂ ಪಾಲಿಸಲೇ ಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಹಿಜಾಬ್ ಮತ್ತು ಕೇಸರಿ ಗಲಭೆ ಬಗ್ಗೆ ಹೈಕೋರ್ಟ್ ನಲ್ಲಿ ಒಂದು ಹಂತದ ವಿಚಾರಣೆ ಆಗಿದೆ. ನಾಳೆ ವಾದ ಆಲಿಸಿದ ನಂತರ ಎರಡು ಮೂರು ದಿನದಲ್ಲಿ ತೀರ್ಪಿನ ನಿರೀಕ್ಷೆ ಇದ್ದು, ವಿದ್ಯಾರ್ಥಿಗಳು ಹೈಕೋರ್ಟ್ ಮತ್ತು ಸರಕಾರದ ಆದೇಶಕ್ಕೆ ಬಧ್ದರಾಗಿರಬೇಕು" ಎಂದರು.
ಇನ್ನು ಎಸ್ಡಿಪಿಐ, ಸಿಎಫ್ಐ ಮತ್ತು ಕಾಂಗ್ರೆಸ್ ಮದ್ಯೆ ಮುಸ್ಲಿಂ ಓಟಿಗಾಗಿ ಪೈಪೋಟಿ ಆರಂಭವಾಗಿದೆ. ಅದು ಕೂಡ ಕಾಪು ವಿಧಾನ ಕ್ಷೇತ್ರದಲ್ಲಿ ನೂರು ಓಟು ಎಸ್ಡಿಪಿಐ ಪಡೆದುಕೊಂಡ ಮೇಲೆ ಕಾಂಗ್ರೆಸ್ ಕೂಡ ಮುಸ್ಲಿಂ ಓಟಿನ ಪೈಪೋಟಿಗೆ ಬಿದ್ದಿದೆ ಎಂದಿದ್ದಾರೆ.
ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆಡಳಿತ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ರಾಗಿರುವ ಯಶ್ಪಾಲ್ ಸುವರ್ಣರನ್ನು ಸ್ಥಾನ ದಿಂದ ತೆಗೆದು ಹಾಕುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೊ ಏನೋ ಈ ಬಗ್ಗೆ ಹೇಳಿದರೆಂದು ತೆಗೆದು ಹಾಕಲು ಆಗುವುದಿಲ್ಲ. ಯಶ್ಪಾಲ್ ಆ ಶಾಲೆಗೆ ದೊಡ್ಡ ದಾನಿ ಎಂದು ಹೇಳಿದ್ದಾರೆ.