ಬಂಟ್ವಾಳ, ಫೆ 08 (DaijiworldNews/HR): ಸರಳತೆ, ಸಜ್ಜನಿಕೆ, ಸಧ್ವಿಚಾರವನ್ನು ನಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡಾಗ, ಅದೇ ನಮಗೆ ಸಾಧನೆಯ ಶಿಖರ ಏರಲು ನೆರವಾಗುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ, ಪ್ರಗತಿ ಬಂಧು - ಸ್ವಸಹಾಯ ಸಂಘಗಳ ಒಕ್ಕೂಟ ಪಾಣೆಮಂಗಳೂರು ವಲಯ ಇವರ ಆಶ್ರಯದಲ್ಲಿ ಸಜಿಪಮೂಡದ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಮಂಗಳವಾರ ನಡೆದ ಪಾಣೆಮಂಗಳೂರು ವಲಯ ಮಟ್ಟದ ಸಾಧನಾ ಸಮಾವೇಶ ಮತ್ತು ಸಜಿಪ ಮೂಡ, ಸಜಿಪನಡು, ಸಜಿಪಮುನ್ನೂರು ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸ್ವಾಭಿಮಾನಿಗಳು, ಸ್ವಾವಲಂಬಿಗಳಾಗಬೇಕೆನ್ನುವುದು ಪೂಜ್ಯ ಹೆಗ್ಗಡೆಯವರ ಆಶಯವಾಗಿದ್ದು, ಶ್ರಮದ ಜೊತೆಗೆ ಸರಳ ಜೀವನ ಇದನ್ನು ಸಾಕಾರಗೊಳಿಸುತ್ತದೆ ಎಂದರು.
ಇನ್ನು ವ್ಯಕ್ತಿತ್ವದಲ್ಲಿ ಇರಲೇಬೇಕಾದ ಕೃತಜ್ಞತೆಯ ಭಾವ ಇಂದು ಮಾಯವಾಗಿದ್ದು, ಕೃತಘ್ನತೆಯೇ ಎಲ್ಲೆಡೆ ಮೇಳೈಸುತ್ತಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ನಕಾರಾತ್ಮಕ ವಿಚಾರಗಳೇ ಮೇಳೈಸುತ್ತಿದ್ದು ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಮೌಢ್ಯದ ಜೊತೆಗೆ ದುಶ್ಚಟಗಳಿಂದಲೂ ದೂರ ಇರಬೇಕು ಎಂದು ಕರೆ ನೀಡಿದ ಅವರು,ದುಶ್ಚಟ ಮುಕ್ತ ಸಮಾಜ ನಿರ್ಮಾಣ ಕ್ಕೆ ಪ್ರತಿಯೊಬ್ಬರೂ ಶ್ರಮಿಸುವಂತೆ ಕರೆ ನೀಡಿದರು.
ಬಂಟ್ವಾಳ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಎ.ಸಿ.ಭಂಡಾರಿ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡವರ ಪಾಲಿನ ಆಶಾಕಿರಣವಾಗಿ ಮೂಡಿಬಂದಿದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ, ಒಕ್ಕೂಟಗಳ ನೂತನ ಅಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳಿಗೆ ಜವಬ್ದಾರಿ ಹಸ್ತಾಂತರಿಸಿದರು. ಯಾವುದೇ ಕಾರ್ಯವನ್ನು ಶ್ರದ್ಧೆಯಿಂದ ಮಾಡಿದಾಗ ಭಗವಂತ ಯಶಸ್ಸು ಕರುಣಿಸುತ್ತಾನೆ, ಪ್ರಾಮಾಣಿಕತೆ ನಮ್ಮ ಬದುಕಿನ ಉಸಿರಾಗಬೇಕು ಎಂದರು.
ಪಾಣೆಮಂಗಳೂರು ವಲಯಾಧ್ಯಕ್ಷ ವಾಮನ ಕುಲಾಲ್ ಅಧ್ಯಕ್ಷತೆ ವಹಿಸಿದ್ದು, ಸಜಿಪಮೂಡ ಗ್ರಾ.ಪಂ.ಅಧ್ಯಕ್ಷೆ ಹರಿಣಾಕ್ಷಿ, ಯೋಜನಾಧಿಕಾರಿ ಜಯಾನಂದ, ಸಜಿಪಮೂಡ ನಾರಾಯಣ ಗುರು ಮಂದಿರದ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಪಾಣೆಮಂಗಳೂರು ಜನಜಾಗೃತಿ ವೇದಿಕೆ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಮಾಜಿ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಜನಜಾಗೃತಿ ವೇದಿಕೆ ಸದಸ್ಯ ಪುರುಷೋತ್ತಮ ನಾಟಿ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಜಿಪಮೂಡ ಒಕ್ಕೂಟದ ನೂತನ ಅಧ್ಯಕ್ಷರಾಗಿ ಹರಿಣಾಕ್ಷಿ, ಸಜಿಪಮುನ್ನೂರು ಒಕ್ಕೂಟದ ನೂತನ ಅಧ್ಯಕ್ಷರಾಗಿ ಗಂಗಾಧರ್ ಹಾಗೂ ಸಜಿಪನಡು ಒಕ್ಕೂಟದ ಅಧ್ಯಕ್ಷರಾಗಿ ಹೇಮ ಮತ್ತು ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು. ವಿವಿಧ ಸ್ಪರ್ಧಾಚಟುವಟಿಕೆಗಳ ಬಹುಮಾನಗಳನ್ನು ವಿತರಿಸಲಾಯಿತು. ಸಜಿಪ ಮುನ್ನೂರು ಸೇವಾಪ್ರತಿನಿಧಿ ಬೇಬಿ ಸ್ವಾಗತಿಸಿದರು.
ಪಾಣೆಮಂಗಳೂರು ವಲಯ ಮೇಲ್ವಿಚಾರಕಿ ಅಮಿತಾ ವರದಿ ಮಂಡಿಸಿ ,ಕಾರ್ಯಕ್ರಮ ನಿರ್ವಹಿಸಿದರು. ಸೇವಾಪ್ರತಿನಿಧಿ ಶಕೀಲಾ ವಂದಿಸಿದರು.