ಬ್ರಹ್ಮಾವರ, ಫೆ 08 (DaijiworldNews/MS): ಅಡಿಕೆ, ತೆಂಗು ಕೃಷಿಕ ಜನ್ನಾಡಿಯ ಅತುಲ್ ಕುಮಾರ್ ಶೆಟ್ಟಿ ಪಪ್ಪಾಯಿ ಕೃಷಿ ಮಾಡುವ ಮೂಲಕ ಪರಿಸರದ ಗಮನ ಸಳೆದಿದ್ದಾರೆ. ಒಮ್ಮೆ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಹೋದಾಗ ಅಲ್ಲಿ ಗಿಡ್ಡ ತಳಿಯ ಫಲಭರಿತ ಪಪ್ಪಾಯ ಗಿಡ ಕಂಡು ಪಪ್ಪಾಯಿ ಬೆಳೆಯುವ ಯೋಚನೆ ಮಾಡಿದರು. ಇವರ ಆಸಕ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪೂರ್ಣ ಸಹಕಾರ, ಉತ್ತೇಜನ ಸಿಕ್ಕಿತು. ಈ ಭಾಗಕ್ಕೆ ಪಪ್ಪಾಯಿ ಬೇಸಾಯ ಹೊಸದಾಗಿರುವುದರಿಂದ ಪೂರಕ ಮಾಹಿತಿ, ತಾಂತ್ರಿಕ ಸಲಹೆ ನೀಡಲಾಯಿತು.
ಮನೆಯ ಸಮೀಪದಲ್ಲಿಯೇ ಸಮತ್ತಟ್ಟಾದ ಸ್ಥಳದಲ್ಲಿ 8 ಅಡಿಗಳ ಅಂತರದಲ್ಲಿ ಒಂದುವರೆ ಅಡಿ ಕಾಲುವೆ ನಿರ್ಮಿಸಿ ಅದಕ್ಕೆ ಸಾವಯವ ಸಂಯುಕ್ತಗಳನ್ನು ಬೆರೆಸಿ, ಭೂಮಟ್ಟಕ್ಕೆ ಏರಿಸಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಿಂದ ತಂದಿರುವ ತೈವಾನ್ ತಳಿಯ 60 ಗಿಡಗಳನ್ನು ನಾಟಿ ಮಾಡಿದರು. ಹೈನುಗಾರರೂ ಆಗಿರುವುದರಿಂದ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ ನೀಡಿದರು. ಆಸಕ್ತಿಯಿಂದ ನಿರ್ವಹಣೆ ಮಾಡಿದರು. ಐದನೇ ತಿಂಗಳಿಗೆ ಫಲ ನೀಡಲಾರಂಭಿಸಿತು. ಪಪ್ಪಾಯಿಗೆ ರೋಗ, ಕೀಟಬಾಧೆ ಕಡಿಮೆಯಾಗಿದ್ದು ಮಿತ ನೀರು ಸಾಕಾಗುತ್ತದೆ. ಮಳೆಗಾಲದಲ್ಲಿ ಬದುಗಳ ಏರಿಸಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರು ನಿಂತರೆ ಬುಡ ಕೊಳೆತು ಗಿಡ ನಾಶವಾಗುತ್ತದೆ. ಗಾಳಿಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಗೂಟ ನೀಡುವುದು ಅಗತ್ಯ. ಕೋತಿಗಳ ಉಪಟಳ ಬಿಟ್ಟರೆ ಪಪ್ಪಾಯಿ ಉತ್ತಮ ಲಾಭದಾಯಕ ಕೃಷಿ ಎನ್ನುತ್ತಾರೆ ಅತುಲ್ ಶೆಟ್ಟಿ.
ಪಪ್ಪಾಯಿ ನಾಟಿ ಮಾಡಿದ 6ನೇ ತಿಂಗಳಿಗೆ ಫಸಲು ಬರುತ್ತದೆ. ಮೂರು ವರ್ಷದ ತನಕ ಇಳುವರಿ ಪಡೆಯಬಹುದು. ನಿರ್ವಹಣೆ ವೆಚ್ಚವೂ ಕಡಿಮೆ. ಮಿತ ನೀರು ಬಳಕೆ ಸಾಕಾಗುತ್ತದೆ. ಈ ಮಣ್ಣು, ಹವಾಮಾನಕ್ಕೆ ಪಪ್ಪಾಯಿ ಉತ್ತಮ ಇಳುವರಿ ಬರುತ್ತದೆ. ಕಾಯಿಯೂ ಉತ್ತಮ ಗಾತ್ರ ಹೊಂದಿದ್ದು ಒಂದೊಂದು ಕಾಯಿ 3-4 ಕೆಜಿ ತೂಗುತ್ತದೆ. ಕೆಜಿಗೆ 25ರಿಂದ 30 ರೂಪಾಯಿ ಸಿಗುತ್ತದೆ. ಹಣ್ಣು ಕೂಡಾ ರುಚಿಕರವಾಗಿದ್ದು, ಅತ್ಯಂತ ಸ್ವಾದಿಷ್ಟಕರವಾಗಿದ್ದು ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದಿದೆ.
ಅತುಲ್ ಶೆಟ್ಟಿಯವರ ಪತ್ನಿ ಸುಶೀಲ ಅವರು, ಧರ್ಮಸ್ಥಳ ಗ್ರಾ.ಯೋಜನೆ ಜಟ್ಟಿಗೇಶ್ವರ ಸ್ವಸಹಾಯ ಸಂಘದ ಸದಸ್ಯೆಯಾಗಿದ್ದು ಯೋಜನೆಯಿಂದ ಸಾಲಸೌಲಭ್ಯದೊಂದಿಗೆ ಅನುದಾನವೂ ಲಭಿಸಿದೆ. ಕೃಷಿ ಯಲ್ಲಿ ಇನ್ನಷ್ಟು ಸಾಧನೆಗೆ ಮಾಹಿತಿ ಮಾರ್ಗದರ್ಶನವೂ ಲಭಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಪಪ್ಪಾಯಿ ಕೃಷಿ ಮಾಡುವ ಮೂಲಕ ಸಾಧನೆ ಮಾಡಿರುವ ಅತುಲ್ ಶೆಟ್ಟಿಯವರು ಇನ್ನಷ್ಟು ವಿಸ್ತರಣೆಯ ಯೋಜನೆ ಹೊಂದಿದ್ದಾರೆ. ಅತುಲ್ ಶೆಟ್ಟಿಯವರ ಪಪ್ಪಾಯಿ ಕೃಷಿತಾಕು ನೋಡಲು ಬೇರೆ ಬೇರೆ ಭಾಗದಿಂದ ಅಧ್ಯಯನಾರ್ತಿಗಳು ಭೇಟಿ ನೀಡಿದ್ದಾರೆ. ಇವರ ಕೃಷಿ ಹಲವಾರು ರೈತರಿಗೆ ಪ್ರೇರಣೆಯಾಗಿದೆ.