ಉಡುಪಿ, ಫೆ 08 (DaijiworldNews/HR): ನಗರದ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತಾರಕ್ಕೇರಿರುವ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ರಜೆ ಘೋಷಣೆ ಮಾಡಿದೆ.
ಪ್ರಾಂಶುಪಾಲ ದೇವದಾಸ್ ನಾಯಕ್ ಅವರು ಸಭೆಯ ಬಳಿಕ ಎರಡೂ ಗುಂಪಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ , ಕಾಲೇಜಿಗೆ ಸದ್ಯಕ್ಕೆ ರಜೆ ಘೋಷಣೆ ಮಾಡಲಾಗಿದ್ದು, ವಿಚಾರ ಕೋರ್ಟ್ ನಲ್ಲಿರುವ ಕಾರಣ ನ್ಯಾಯಾಲಯ ತೀರ್ಪು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಕಾಲೇಜು ಸೂಚನೆ ನೀಡುವವರೆಗೂ ವಿದ್ಯಾರ್ಥಿಗಳು ಕಾಲೇಜಿಗೆ ಬರಬಾರದು" ಎಂದಿದ್ದಾರೆ.
ಇನ್ನು ಈಗಾಗಲೇ ಕಾಲೇಜಿಗೆ ತಹಶೀಲ್ದಾರ್ ಕೂಡ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ವಿದ್ಯಾರ್ಥಿಗಳು ಕ್ಯಾರೇ ಅನ್ನದೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾಲೇಜಿಗೆ ಇಂದು ರಜೆಯನ್ನು ಈಗಾಗಲೇ ಘೋಷಿಸಿದ್ದರು ವಿದ್ಯಾರ್ಥಿಗಳು ಗೇಟಿನ ಹೊರಗಟೆ ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಹಿಜಾಬ್ಗೆ ವಿರೋಧವಾಗಿ ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಮತ್ತು ಪೇಟ ಧರಿಸಿ ಬಂದಿದ್ದು, ಕಾಲೇಜು ಕ್ಯಾಂಪಸ್ ಒಳಗಿದ್ದ ವಿದ್ಯಾರ್ಥಿಗಳನ್ನು ಕ್ಯಾಂಪಸ್ ನಿಂದ ಹೊರಕ್ಕೆ ಕಳುಹಿಸಲಾಗಿದೆ. ವಿದ್ಯಾರ್ಥಿಗಳು ಕೂಡಲೇ ಮನೆಗೆ ಹೋಗುವಂತೆ ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ.