ಬಂಟ್ವಾಳ, ಫೆ. 07 (DaijiworldNews/SM): ಎಲ್ಲಾ ಧರ್ಮದ ಜನರಿಗೂ ಬದುಕಲು ಅವಕಾಶ ನೀಡಿದ ಅವಿಭಜಿತ ದ.ಕ. ಜಿಲ್ಲೆ ಪವಿತ್ರವಾದ ಜಿಲ್ಲೆ. ಇಲ್ಲಿ ಸಂಸ್ಕೃತಿ, ಶಿಕ್ಷಣ, ಧರ್ಮಕ್ಷೇತ್ರಗಳಿಗಳಿಗೆ ಹೆಸರುವಾಸಿಯಾದ ಈ ಜಿಲ್ಲೆಯಲ್ಲಿ ಉತ್ತಮ ಪರಂಪರೆ, ಧರ್ಮ, ಸಂಸ್ಕೃತಿಯನ್ನು ಇಲ್ಲಿನ ಜನರು ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿನ ಜನ ಇಡೀ ರಾಜ್ಯಕ್ಕೆ ಮಾರ್ಗದರ್ಶಕರು, ಜಾತಿ, ಧರ್ಮದ ಭೇದ ಬಿಟ್ಟು ಒಗ್ಗಟ್ಟಿನಿಂದ ಬದುಕುತ್ತಿದ್ದೀರಿ. ಈಗ ಕೆಲವೆಡೆ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತಿದ್ದರೂ ಅಂತಿಮವಾಗಿ ನಂಬಿಕೆ, ಪ್ರೀತಿ, ವಿಶ್ವಾಸ ಮಾತ್ರ ಉಳಿದು ಮಾನವ ಧರ್ಮಕ್ಕೆ ಜಯವಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಬಳಿ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ನೂತನ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ 1008 ಶ್ರೀ ಆದಿನಾಥ ತೀರ್ಥಂಕರರ ಪಂಚಕಲ್ಯಾಣ, ಪ್ರತಿಷ್ಠಾಮಹೋತ್ಸವದಲ್ಲಿ ಸೋಮವಾರ ಕೊನೆಯದಿನದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಧ್ಬುತವಾದ ಬಸದಿ ಇಲ್ಲಿ ನಿಮಾಣಗೊಂಡಿದೆ. ಇಂತಹ ಪವಿತ್ರ ಕಾರ್ಯಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಆದಿನಾಥ ಸ್ವಾಮೀ ಶಾಂತಿ ನೆಮ್ಮದಿಯನ್ನು ನೀಡಲಿ ಎಂದು ಶುಭ ಕೋರಿದ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದೇ ವಿಶೇಷ ವಿಮಾನದ ಮೂಲಕ ಆಗಮಿಸಿರುವುದಾಗಿ ತಿಳಿಸಿದರು.