ಬಂಟ್ವಾಳ, ಫೆ. 07 (DaijiworldNews/SM): ಖಾಸಗಿ ಫೈನಾನ್ಸ್ ಕಂಪೆನಿಯವರು ಬೈಕ್ ಒಂದರ ಕಂತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕಿರಿ ಮಾಡಿದರು ಎಂಬ ಕಾರಣಕ್ಕೆ ಸ್ವತ: ಬೈಕ್ ಮಾಲಕ ಶೋ ರೂಂ ಎದುರಿನಲ್ಲಿ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಬಿ.ಸಿ.ರೋಡಿನ ಕೈಕಂಬ ಎಂಬಲ್ಲಿ ಸೋಮವಾರ ಸಂಜೆ ವೇಳೆ ನಡೆದಿದೆ.
ಬೈಕ್ ಮಾಲಕ ಫರಂಗಿಪೇಟೆ ನಿವಾಸಿ ಮಹಮ್ಮದ್ ಹರ್ಷಾದ್ ಎಂಬಾತ ಬೈಕ್ ಗೆ ಪೆಟ್ರೋಲ್ ಸುರಿದು ಬೈಕ್ ನ್ನು ಬೆಂಕಿಗೆ ಆಹುತಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹರ್ಷಾದ್ ಅವರು ಫೈನಾನ್ಸ್ ನಿಂದ ಬೈಕ್ ಕೊಂಡುಕೊಳ್ಳಲು ಸಾಲ ಮಾಡಿದ್ದು ಆ ಬಳಿಕ ಸಾಲದ ಕಂತು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್ ನವರು ಬೈಕ್ ಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಮಾಲಕನ ಕೈಯಿಂದ ಪಡೆದುಕೊಂಡು ಕೂಡಲೇ ಸಾಲದ ಕಂತನ್ನು ಪಾವತಿ ಮಾಡುವಂತೆ ತಿಳಿಸಿದ್ದರು.
ಸಾಲದ ಕಂತಿನ ಪಾವತಿಗಾಗಿ ಫೈನಾನ್ಸ್ ನವರು ಕಿರಿಕಿರಿ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಮಾಲಕ ಬೈಕ್ ಜೊತೆ ಕೈಕಂಬದ ಬೈಕ್ ಶೋ ರೂಂಗೆ ತೆರಳಿ ಆಫೀಸ್ ನಲ್ಲಿ ಕೆಲ ಹೊತ್ತು ಮಾತುಕತೆ ನಡೆಸಿ ಅತನಿಗೆ ಯಾವುದೇ ರೀತಿಯ ಲಾಭವಾಗಿಲ್ಲ ಎಂಬ ಕೋಪದಲ್ಲಿ ಬಳಿಕ ಹೊರಗೆ ಬಂದು ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬೈಕ್ ಸಂಪೂರ್ಣ ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಬಂಟ್ವಾಳ ಅಗ್ನಿಶಾಮಕ ದಳದವರು ಸಕಾಲದಲ್ಲಿ ಆಗಮಿಸಿ ಶೋ ರೂಂ ನಲ್ಲಿ ನಿಲ್ಲಿಸಲಾಗಿದ್ದ ಉಳಿದ ಬೈಕ್ ಗಳಿಗೆ ಬೆಂಕಿ ಪಸರಿದಂತೆ ನೀರು ಹಾಯಿಸಿ ನಂದಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದ ಅವರು ಕಟ್ಟಡದಲ್ಲಿರುವ ಸಿ.ಸಿ.ಕ್ಯಾಮರಾದ ವಿಡಿಯೋ ವನ್ನು ತುಣುಕುಗಳನ್ನು ಪಡೆದುಕೊಂಡಿದ್ದಾರೆ.